ಹಾವಿಗೆ ಹಾಲೆರೆಯುವುದನ್ನು ಕೈಬಿಡಲು ಸ್ವಾಮಿಜಿ ಕರೆ
ಚಿತ್ರದುರ್ಗ, ಆ.7: ಅನಾಥ ಮಕ್ಕಳಿಗೆ ಹಾಲುವಿತರಿಸುವ ಮೂಲಕ ಮುರುಘರಾಜೇಂದ್ರ ಮಠದ ಶಿವಮೂರ್ತಿ ಮುರುಘಸ್ವಾಮಿಗಳುನಾಗಪಂಚಮಿ ಯನ್ನುವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಈ ಹಬ್ಬದಂದು ನಾಗ ಪ್ರತಿಮೆಗಳಿಗೆ ಹಾಲೆರೆಯುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ಹೀಗೆ ಮಾಡುವುದರಿಂದ ಅನಾವಶ್ಯಕವಾಗಿ ಹಾಲು ವ್ಯರ್ಥವಾಗುತ್ತದೆ. ಈ ರೀತಿಯ ಕುರುಡು ನಂಬಿಕೆಗಳನ್ನು ಜನ ಬಿಡಬೇಕು ಎಂದು ಸ್ವಾಮೀಜಿಗಳು ಕರೆಕೊಟ್ಟರು. ಕಳೆದ ಐದು ವರ್ಷಗಳಿಂದ ಈ ಸಂಪ್ರದಾಯಕ್ಕೆ ಅಂತ್ಯ ಹಾಡಲು ಅವಿರತವಾಗಿ ಅವರು ಶ್ರಮಿಸುತ್ತಿದ್ದಾರೆ. ಅದರೆ ಭಕ್ತರು ಮಾತ್ರ ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯನ್ನು ಬಿಟ್ಟಿಲ್ಲ. ಹಾಲು ಮತ್ತು ಇನ್ನಿತರ ಆಹಾರಗಳನ್ನು ಸಂಪ್ರದಾಯದ ಹೆಸರಿನಲ್ಲಿ ಕಡು ಬಡವರಿಗೂ ನೀಡದೆ ವ್ಯರ್ಥವಾಗಿ ಮಣ್ಣುಪಾಲು ಮಾಡಲಾಗುತ್ತಿದೆ. ಈ ರೀತಿಯ ಆಚರಣೆಗಳನ್ನುಮತ್ತಷ್ಟು ಅರ್ಥವತ್ತಾಗಿ ಹಾಗೂ ದೃಢ ಸಂಕಲ್ಪದಿಂದ ಆಚರಿಸಬೇಕಾಗಿದೆ ಎಂದು ಹೇಳಿದರು.
ಬುಧವಾರ ಅವರು ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆಯ ಬಾಲ ಮಂದಿರಕ್ಕೆ ಭೇಟಿ ಕೊಟ್ಟು ಅಲ್ಲಿನ ಅನಾಥ ಮಕ್ಕಳಿಗೆ ಹಾಲನ್ನು ವಿತರಿಸಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸ್ವಾಮೀಜಿಗಳು, ಹಾವುಗಳು ಹಾಲು ಕುಡಿಯುತ್ತವೆ ಎಂದು ಜನ ತಪ್ಪಾಗಿ ತಿಳಿದಿದ್ದಾರೆ. ಹಾವುಗಳು ಮೊಟ್ಟೆ ಹಾಗೂ ಇನ್ನಿತರ ಪ್ರಾಣಿಗಳನ್ನು ತಿಂದು ಜೀವಿಸುತ್ತವೆಯೇ ಹೊರತು ಅವು ಯಾವುದೇ ಕಾರಣಕ್ಕೂ ಹಾಲನ್ನು ಕುಡಿಯುವುದಿಲ್ಲ ಎಂದರು. ಜನ ಹೆಚ್ಚಾಗಿ ನಾಗರ ಪ್ರತಿಮೆಗಳಿಗೆ ಹಾಲೆರೆಯುತ್ತಿದ್ದಾರೆ. ಈ ರೀತಿಯಾಗಿ ಬಳಸಿದ ಹಾಲು ವ್ಯರ್ಥವಾಗುತ್ತಿದ್ದು ಜನ ಈ ರೀತಿಯ ಕುರುಡು ನಂಬಿಕೆಗಳನ್ನು ಕೈಬಿಡಬೇಕು ಎಂದು ಕರೆಕೊಟ್ಟರು.
(ದಟ್ಸ್ಕನ್ನಡ ವಾರ್ತೆ)
ಹೆಚ್ಚಿನ ವಿವರಗಳಿಗೆ ಮುರುಘ ಮಠದ ವೆಬ್ ತಾಣವನ್ನು ವೀಕ್ಷಿಸಿ
ಪೂರಕಓದಿಗೆ:
ಸಡಗರ, ಸಂಭ್ರಮದಿಂದ ನಾಗರ ಪಂಚಮಿ ಆಚರಣೆ












Click it and Unblock the Notifications