ಆಗಸ್ಟ್ ಅಂತ್ಯಕ್ಕೆ ಗಣಿ ಅವ್ಯವಹಾರದ ವರದಿ ಸಲ್ಲಿಕೆ
ಬೆಂಗಳೂರು, ಆ. 6 : ಅಕ್ರಮ ಗಣಿಗಾರಿಕೆ ಹಾಗೂ ಗಣಿ ಅವ್ಯವಹಾರದಲ್ಲಿ ಪ್ರಭಾವಿ ರಾಜಕಾರಣಿಗಳು ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ತಿಂಗಳ ಅಂತ್ಯದೊಳಗೆ ಅಕ್ರಮ ಗಣಿಗಾರಿಕೆ ಮತ್ತು ಗಣಿ ಅವ್ಯವಹಾರದಲ್ಲಿ ತೊಡಗಿರುವ ಪ್ರಭಾವಿ ರಾಜಕಾರಣಿ ಮತ್ತು ಹಿರಿಯ ಅಧಿಕಾರಿಗಳ ಪಟ್ಟಿಯ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಳೆದ ಜೂನ್ ತಿಂಗಳಲ್ಲಿ ಗಣಿ ವರದಿಯನ್ನು ಸಲ್ಲಿಸಬೇಕಾಗಿತ್ತು. ಎರಡು ತಿಂಗಳ ತಡವಾಗಿದೆ, ಈ ತಿಂಗಳ ಕೊನೆಯಲ್ಲಿ ವರದಿ ಸಲ್ಲಿಸುವ ಪ್ರಯತ್ನ ನಡೆಸಿದ್ದೇವೆ ಎಂದರು. ಗಣಿ ವ್ಯವಹಾರ ನಡೆಯುತ್ತಿರುವ ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಗಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗಿತ್ತು. ಸಮಿತಿ ಈಗಾಗಲೇ ತಮ್ಮ ವರದಿಯನ್ನು ಲೋಕಾಯುಕ್ತ ಕಚೇರಿಗೆ ತಲುಪಿಸಿದೆ. ಅದನ್ನೆಲ್ಲಾ ಸೇರಿಸಿ ಸಮಗ್ರ ವರದಿ ತಯಾರಿಸಲಾಗುತ್ತಿದೆ ಎಂದು ಹೇಳಿದರು.
ಈಗಾಗಲೇ ಗಣಿ ಹಗರಣದಲ್ಲಿ ಭಾಗಿಯಾಗಿರುವ ಪ್ರಭಾವಿ ರಾಜಕಾರಣಿಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಪಾಲ್ಗೊಂಡಿರುವ ಕೆಲ ಅಧಿಕಾರಿಗಳಿಗೂ ನೊಟೀಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮಧ್ಯಂತರ ಪತ್ರ ರವಾನಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ಸಮಗ್ರ ವರದಿ ನೀಡುವ ಭರವಸೆಯನ್ನು ಸಂತೋಷ ಹೆಗಡೆ ನೀಡಿದರು. ಆದರೆ ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರುಗಳನ್ನು ಬಹಿರಂಗಗೊಳಿಸಲು ಅವರು ನಿರಾಕರಿಸಿದರು. ಸರ್ಕಾರಕ್ಕೆ ವರದಿ ನೀಡಿದ ನಂತರ ಎಲ್ಲವನ್ನು ಬಹಿರಂಗಗೊಳಿಸುವುದಾಗಿ ಅವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)