ಶಿಕ್ಷಕರನ್ನು ಹಿಗ್ಗಾಮುಗ್ಗಾ ಥಳಿಸಿದ ವಿದ್ಯಾರ್ಥಿಯ ಸ್ನೇಹಿತರು
ರಾಯಚೂರು, ಆ. 2 : ನಿರಂತರವಾಗಿ ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿದ್ದ ವಿದ್ಯಾರ್ಥಿಯನ್ನು ಶಿಕ್ಷಿಸಿದ ಶಿಕ್ಷಕರನ್ನೇ ಆ ವಿದ್ಯಾರ್ಥಿಯ ಸ್ನೇಹಿತರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಾಡಗೇರಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಪ್ರೌಢ ಶಾಲೆಯ ಶಿಕ್ಷಕರಿಂದ ತರಾಟೆಗೊಳಗಾಗಿದ್ದ ವಿದ್ಯಾರ್ಥಿಯೇ ಹತ್ತು ಹದಿನೈದು ಯುವಕರನ್ನು ಶಾಲೆಗೆ ಕರೆದುಕೊಂಡು ಬಂದು ಮೂವರು ಶಿಕ್ಷಕರನ್ನು ಮನಬಂದಂತೆ ಥಳಿಸಿದ್ದಾರೆ. ಗೂಂಡಾಗಿರಿ ನಡೆಸಿದ 7 ಯುವಕರನ್ನು ಗ್ರಾಮಸ್ಥರೇ ಕೋಣೆಯೊಂದರಲ್ಲಿ ಕೂಡಿಹಾಕಿದ್ದಾರೆ. ಬಸವರಾಜ್ ಸೇರಿದಂತೆ ಇನ್ನುಳಿದ 5 ಯುವಕರು ತಪ್ಪಿಸಿಕೊಂಡಿದ್ದಾರೆ.
ಘಟನೆಯ ವಿವರ : ಬಸವರಾಜ್ ಎಂಬ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ತಾನು ಪ್ರೀತಿಸುತ್ತಿದ್ದ ಒಂಬತ್ತನೇ ತರಗತಿಯ ಕವಿತಾ ಎಂಬ ವಿದ್ಯಾರ್ಥಿನಿಯೋರ್ವಳನ್ನು ಮೇಲಿಂದ ಮೇಲೆ ಚುಡಾಯಿಸುತ್ತಿದ್ದ ಮತ್ತು ಪ್ರೀತಿಸೆಂದು ಪೀಡಿಸುತ್ತಿದ್ದ. ಶಾಲೆಗೆ ಓದುವುದಕ್ಕೆ ಬರಬೇಕು ಚುಡಾಯಿಸುವುದಕ್ಕಲ್ಲ ಎಂದು ಶ್ರೀನಿವಾಸ್ ಎಂಬ ಶಿಕ್ಷಕರು ಮೊದಲು ಎಚ್ಚರಿಕೆ ನೀಡಿದ್ದರು. ಆತ ಹದ್ದುಬಸ್ತಿಗೆ ಬರದಿದ್ದಾಗ ಶಿಕ್ಷೆಗೆ ಒಳಪಡಿಸಿದ್ದರು ಕೂಡ. ಇದರಿಂದ ಕುಪಿತಗೊಂಡ ಬಸವರಾಜ್ ಹಗೆ ತೀರಿಸಿಕೊಳ್ಳುವುದಾಗಿ ಹೇಳಿದ್ದ.
ಶನಿವಾರ ತನ್ನ ಸ್ನೇಹಿತರೊಂದಿಗೆ ಶಾಲೆಗೆ ನುಗ್ಗಿದ ಬಸವರಾಜ್ ಮನಬಂದಂತೆ ಆ ಶಿಕ್ಷಕನನ್ನು ಥಳಿಸಿದ್ದಾನೆ. ತಡೆಯಲು ಬಂದ ಇನ್ನೂ ಇಬ್ಬರು ಶಿಕ್ಷಕರಾದ ನಿಂಗಪ್ಪ ಮತ್ತು ಪ್ರಭುಲಿಂಗರನ್ನು ಕೂಡ ಯುವಕರ ಗುಂಪು ಹೊಡೆದಿದೆ. ಮೂವರೂ ಶಿಕ್ಷಕರಿಗೆ ತೀವ್ರ ಗಾಯಗಳಾಗಿವೆ. ಘಟನೆ ನಡೆದ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡಿಡಲಾಗಿದ್ದ ಯುವಕರನ್ನು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಹುಡುಕಾಟ ನಡೆದಿದೆ.
ಯುವಕರನ್ನು ಕೂಡಿಹಾಕಿದ್ದ ಗ್ರಾಮಸ್ಥರು ರೊಚ್ಚಿಗೆದ್ದು ಯುವಕರನ್ನು ಸಿಕ್ಕಾಪಟ್ಟೆ ಹೊಡೆದಿದ್ದಾರೆ ಮತ್ತು ದಂಗೆಯೆದ್ದು ಕೆಲ ಆಟೋಗಳಿಗೆ ಬೆಂಕಿ ಕೂಡ ಹಚ್ಚಿದ್ದಾರೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿತ್ತು.
(ದಟ್ಸ್ ಕನ್ನಡ ವಾರ್ತೆ)