ನಾಡಹಬ್ಬ ದಸರಾ ಮಹೋತ್ಸವಕ್ಕೆ ಪೂರ್ವಸಿದ್ಧತೆ
ಬೆಂಗಳೂರು, ಆ.1: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸೆಪ್ಟೆಂಬರ್ 30ರಿಂದ ಅಕ್ಟೋಬ್ವರ್ 9ರವರೆಗೆ ನಡೆಯಲಿದೆ. ಉತ್ಸವವನ್ನು ಉದ್ಘಾಟಿಸಲು ತುಮಕೂರು ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮಿಜಿ ಅವರನ್ನು ಸರ್ಕಾರ ಕೋರಲಿದೆ. ಹಾಗೆಯೇ ವಿಶೇಷ ಅಥಿತಿಯಾಗಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ಆಹ್ವಾನಿಸಲಾಗಿದೆ.
ದಸರಾ ಮಹೋತ್ಸವದ ಪೂರ್ವ ಸಿದ್ಧತೆ ಬಗ್ಗೆ ಗುರುವಾರ ವಿಧಾನಸೌಧದಲ್ಲಿ ಸಮಗ್ರ ಚರ್ಚೆ ನಡೆಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಹೀಗಿವೆ.
ಪ್ರಸಕ್ತ ಸಾಲಿನ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ 10ಕೋಟಿ ರು.ಗಳನ್ನು ನಿಗದಿಪಡಿಸಿದೆ. ಹಾಗೆಯೇ ಮೈಸೂರು ನಗರದ ಅಭಿವೃದ್ಧಿ ಹಾಗೂ ಸೌಂದರ್ಯವನ್ನು ವೃದ್ಧಿಸಲು 7.50 ಕೋಟಿ ರು.ಅನುದಾನ ನೀಡಲಿದೆ. ಕಳೆದ ವರ್ಷಕ್ಕಿಂತ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆಗೆ 3.50 ಕೋಟಿ ರು.ವೆಚ್ಚದ ಅಂದಾಜುಮಾಡಲಾಗಿದೆ. ಗೋಲ್ಡ್ ಕಾರ್ಡ್ ಮಾರಾಟದಿಂದ ಹೆಚ್ಚಿನಆದಾಯನಿರೀಕ್ಷಿಸಲಾಗಿದೆ.
ಪ್ರತಿವರ್ಷದಂತೆ ಸೆ.30ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವದ ಉದ್ಘಾಟನೆ ನಡೆಯಲಿದೆ. ಅಂದು ಚಲನಚಿತ್ರೋತ್ಸವ, ದಸರಾ ವಸ್ತುಪ್ರದರ್ಶನ, ಕುಸ್ತಿ ಪಂದ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆಯಾಗಲಿವೆ. ಅಕ್ಟೋಬರ್ 1ರಂದು ಯುವ ದಸರಾ, ಅ.9ರಂದು ನಂದಿಧ್ವಜ ಪೂಜೆ, ವಿಜಯದಶಮಿಮೆರವಣಿಗೆ, ಪಂಜಿನ ಕವಾಯತು ಕಾರ್ಯಕ್ರಮಗಳು ನಡೆಯಲಿವೆ.
ವಿಧಾನಸಭೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ವಿಜಯಕುಮಾರ್, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಎ.ರಾಮದಾಸ್, ಚಿಕ್ಕಮಾಧು, ತೋಂಟದಾರ್ಯ, ಸಿ.ಮಂಜುನಾಥ್, ಸಿದ್ಧರಾಜು, ಮೇಯರ್ ಆಯೂಬ್ ಖಾನ್ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಭಾಗವಹಿಸಿದ್ದರು.
(ದಟ್ಸ್ಕನ್ನಡ ವಾರ್ತೆ)