ಕುಸೇಲನ್ ಗೆ ಗ್ರಹಣ : ಜಯಮಾಲಾ ಸಂಧಾನ ವಿಫಲ
ಬೆಂಗಳೂರು, ಜು. 31 : ತೀವ್ರ ವಿವಾದ ಹುಟ್ಟುಹಾಕಿರುವ ಕುಸೇಲನ್ ಚಿತ್ರದ ಬಿಡುಗಡೆ ಮತ್ತಷ್ಟು ಕಗ್ಗಂಟಿನ ದಾರಿ ಹಿಡಿದಿದೆ. ಕನ್ನಡಪರ ಸಂಘಟನೆಗಳೊಂದಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರ ಸಂಧಾನ ಮಾತುಕತೆ ವಿಫಲವಾಗಿದೆ.
ಕನ್ನಡ ವಿರೋಧಿ ಕನ್ನಡದ ನಟ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೋಗೇನಕಲ್ ವಿಷಯದಲ್ಲಿ ಕನ್ನಡಿಗರನ್ನು ನಿಂದಿಸುವ ಮೂಲಕ ಅವಮಾನ ಮಾಡಿದ್ದರು. ಈ ಕಾರಣಕ್ಕೆ ಕನ್ನಡಪರ ಸಂಘಟನೆಗಳು ರಜನಿಕಾಂತ್ ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು. ಕೇಳದಿದ್ದರೆ ಅವರ ನಟಿಸಿದ ಕುಸೇಲನ್ ಚಿತ್ರದ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ನಾರಾಯಣಗೌಡ ಬಣ ಮತ್ತು ಪ್ರವೀಣ್ ಶೆಟ್ಟಿ ಬಣ ಕನ್ನಡಪರ ಕಾರ್ಯಕರ್ತರು ಛೇಂಬರ್ ಮುಂದೆ ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಆದರೆ ರಜನಿಕಾಂತ್ ಅವರು ಕುಸೇಲನ್ ಚಿತ್ರ ಬಿಡುಗಡೆ ಸಹಕರಿಸಿ ಎಂದು ಅವರು ಚಿತ್ರಮಂಡಳಿಗೆ ಪತ್ರ ಬರೆದಿದ್ದರು. ಆದರೆ ಜಯಾಮಾಲಾ ಅವರು ರಜನಿಕಾಂತ್ ಅವರು ಕ್ಷಮೆ ಕೇಳಿದ್ದಾರೆ ಎಂದು ಹೇಳಿದ್ದನ್ನು ಕನ್ನಡಪರ ಸಂಘಟನೆಗಳು ಒಪ್ಪಲು ನಿರಾಕರಿಸದ್ದು, ಕನ್ನಡ ಮಾಧ್ಯಮವೊಂದರ ಮೂಲಕ ಕ್ಷಮೆ ಕೇಳಬೇಕು. ಇನ್ನೆಂದೂ ಕನ್ನಡದ ತಂಟೆ ಬರಬಾರದು ಎಂದು ಮಾತು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕನ್ನಡ ವಿರೋಧಿ ನಿಲುವುವನ್ನು ಮಂಡಳಿ ತಗೆದುಕೊಳ್ಳುವುದಿಲ್ಲ. ನಾವು ಕೂಡಾ ಕನ್ನಡಿಗರು, ನಮಗೂ ಕೂಡಾ ಅವಮಾನ ಆಗಿದೆ. ನಿಮ್ಮ ಅನಿಸಿಕೆಯೇ ನಮ್ಮ ಅನಿಸಿಕೆಯಾಗಿದೆ. ಎಲ್ಲರೂ ಒಗ್ಗೂಡಿ ಒಂದು ನಿರ್ಣಯಕ್ಕೆ ಬರೋಣ ಎಂದು ಅವರು ಸ್ಪಷ್ಟಪಡಿಸಿದರು. ಅಲ್ಲದೇ ಕಳೆದ ಎರಡು ದಿನಗಳಿಂದ ನಾನು ರಜನಿಕಾಂತ್ ಅವರನ್ನು ಸಂಪರ್ಕಿಸಿದ್ದೇನೆ. ಆವರನ್ನು ಕನ್ನಡಿಗರ ಕ್ಷಮೆ ಕೇಳಿದ್ದಾರೆ ಎಂದು ಹೇಳಿದ ಜಯಮಾಲಾ, ಸತತ ಒಂಬತ್ತು ಸಲ ಅವರೊಟ್ಟಿಗೆ ಮಾತನಾಡಿದ್ದೇನೆ. ಈಗ ಕೂಡಾ ಸಂಪರ್ಕದಲ್ಲಿದ್ದೇನೆ ಎಂದು ಅವರು ಹೇಳಿದರು.
ಕನ್ನಡಿಗರ ಕ್ಷಮೆ ಕೇಳುವವರೆಗೂ ಕುಸೇಲನ್ ಬಿಡುಗಡೆ ಸಾಧ್ಯವಿಲ್ಲ. ಬಹಿರಂಗ ಕ್ಷಮೆ ಕೇಳಬೇಕು ಎಂದು ಕನ್ನಡಪರ ಸಂಘಟನೆ ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ. ಬಹಿರಂಗ ಕ್ಷಮೆ ಕೇಳದಿದ್ದರೆ ಯಾವ ಕಾರಣಕ್ಕೂ ಚಿತ್ರ ಬಿಡುಗಡೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕನ್ನಡಿಗರನ್ನು ಒದೆಯಬೇಕು. ಅವರು ವಿಷಕ್ರಿಮಿಗಳು ಎಂದು ಉದ್ವೇಗದಿಂದ ಮಾತನಾಡಿರುವ ಅವರು ಕರ್ನಾಟಕಕ್ಕೆ ಬರಲಿ ತಕ್ಕ ಪಾಠ ಕಲಿಸಿದೆ ಬಿಡುವೆ ಎಂದು ಶೆಟ್ಟಿ ಸ್ಪಷ್ಟಪಡಿಸಿದರು.
ಹೋಗೇನಕಲ್ ವಿಷಯದಲ್ಲಿ ರಜನಿಕಾಂತ್ ಬರಬಾರದು, ಹೋಗೇನಕಲ್ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ್ದು ಎಂದು ಹೇಳುವ ಜತೆಗೆ ಹಿಂದೆ ಕನ್ನಡಿಗರಿಗೆ ಮಾಡಿದ ಅವಮಾನಕ್ಕೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಕ್ಷಮೆ ಕೇಳುವವರೆಗೂ ಯಾವ ಕಾರಣಕ್ಕೂ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದ್ದಾರೆ.(ದಟ್ಸ್ ಕನ್ನಡ ವಾರ್ತೆ)