ಅಧಿಕಾರಿಗಳ ಕುಚೋದ್ಯಕ್ಕೆ ಎಸ್ಎಲ್ ಭೈರಪ್ಪ ಖಂಡನೆ
ಬೆಂಗಳೂರು, ಜು.28: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಐಎಎಸ್ ಅಧಿಕಾರಿಗಳು ಕನ್ನಡ ಮತ್ತು ಕನ್ನಡಪರ ಹೋರಾಟಗಾರರನ್ನು 'ಜೋಕರ್'ಗಳೆಂದು ಕರೆದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿರ್ದೇಶಕಿ ಏಕ್ ರೂಪ್ ಕೌರ್ ಹಾಗೂ ಉಪ ನಿರ್ದೇಶಕಿ ಪ್ರೇಮ್ ಕುಮಾರ್ ಅವರೇ ಕನ್ನಡ ವಿರೋಧಿ ನೀತಿ ಅನುಸರಿಸ್ತ್ತಿರುವ ಐಎಎಸ್ ಅಧಿಕಾರಿಗಳು. ಇವರು ವಾಟಾಳ್ ನಾಗರಾಜ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರನ್ನು 'ಜೋಕರ್'ಗಳು ಎಂದು ಕರೆದಿದ್ದರು.
ವಿಧಾನಸಭೆಯಲ್ಲಿ ಈ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರೆ ಸಾಲದು ಕನ್ನಡಕ್ಕೆ ತೊಡಕಾಗಿರುವ ಇವರ ವಿರುದ್ಧ ಪಕ್ಷಬೇಧವನ್ನು ಮರೆತು ಎಲ್ಲ ಶಾಸಕರು ಒಂದಾಗಬೇಕು ಎಂದು ಭೈರಪ್ಪ ಮನವಿ ಮಾಡಿಕೊಂಡಿದ್ದಾರೆ. ರಾಜ್ಯದ ಐಎಎಸ್ ಅಧಿಕಾರಿಗಳಿಗೆ ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಬರುತ್ತದೆಯೇ ಎಂಬುದನ್ನು ಪರೀಕ್ಷಿಸಲು ಕನ್ನಡ ಪರೀಕ್ಷೆ ಇಡಬೇಕು. ಅನುತ್ತೀರ್ಣರಾದವರನ್ನು ಮುಲಾಜಿಲ್ಲದೆ ರಾಜ್ಯದಿಂದ ಹೊರಗಟ್ಟಬೇಕು ಎಂದರು. ಈ ದಿಶೆಯಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿ ಶೀಘ್ರವೇ ಸುತ್ತೋಲೆ ಹೊರಡಿಸಬೇಕು ಎಂದು ತಿಳಿಸಿದರು.
ಕನ್ನಡ ಪರ ಹೋರಾಟಗಾರರನ್ನು 'ಜೋಕರ್'ಗಳು ಎಂದಿರುವ ಐಎಎಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಚಂದ್ರಶೇಖರ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಇಂತಹ ಐಎಎಸ್ ಅಧಿಕಾರಿಗಳು ನಮ್ಮ ರಾಜ್ಯಕ್ಕೆ ಬೇಕಾಗಿಲ್ಲ. ಅವಮಾನಕ್ಕೆ ಒಳಗಾಗಿರುವ ಕನ್ನಡ ಹೋರಾಟಗಾರರಾದ ಮುಖ್ಯಮಂತ್ರಿ ಚಂದ್ರು ಮತ್ತು ವಾಟಾಳ್ ನಾಗರಾಜ್ ಅವರಿಗೆ ನ್ಯಾಯ ಸಿಗದಿದ್ದರೆ ಹೋರಾಟಕ್ಕೆ ಧುಮುಕುವುದಾಗಿ ಅವರು ಎಚ್ಚರಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)