ನಟ ವಿಷ್ಣು ಮನೆಗೆ ಹುಸಿ ಬಾಂಬ್ ಬೆದರಿಕೆ!
ಬೆಂಗಳೂರು, ಜು.28: ನಟ ಡಾ.ವಿಷ್ಣುವರ್ಧನ್ ಅವರ ಮನೆಗೆ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ನಿಯಂತ್ರಣ ಕಚೇರಿಗೆ ಕರೆ ಬಂದ ಹಿನ್ನಲೆಯಲ್ಲಿ ತಿಲಕ್ನಗರ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಧಾವಿಸಿದರು. ತಪಾಸಣೆ ಮಾಡಲಾಗಿ ಅಲ್ಲಿ ಯಾವುದೇ ಬಾಂಬ್ ಪತ್ತೆಯಾಗದೆ ಇದು ಹುಸಿ ಬಾಂಬ್ ಕರೆ ಎಂದು ಗೊತ್ತಾಯಿತು.
ಭಾನುವಾರ ಮಧ್ಯಾಹ್ನ 12ಗಂಟೆಗೆ ಕರೆ ಮಾಡಿದ ಅಪರಿಚತ ವ್ಯಕ್ತಿ ಜಯನಗರದ 4ನೇ ಟಿ ಬ್ಲಾಕ್ನ 34ನೇ ತಿರುವಿನಲ್ಲಿರುವ ವಿಷ್ಣವರ್ಧನ್ ಅವರ ಮನೆಯ ಕಾಂಪೌಂಡ್ ಒಳಗೆ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದ್ದ. ಇದು ಹುಸಿ ಬಾಂಬ್ ಬೆದರಿಕೆ ಎಂದು ತಪಾಸಣೆಯ ನಂತರ ತಿಳಿಯಿತು. 24x7 ಗಂಟೆಗಳ ಕಾಲವೂ ಖಾಸಗಿ ಭದ್ರತೆಯಲ್ಲಿರುವ ವಿಷ್ಣುವರ್ಧನ್ ಅವರ ಮನೆಗೆ ಯಾವುದೇ ಅಪರಿಚಿತ ವ್ಯಕ್ತಿಗಳು ಬರಲು ಸಾಧ್ಯವೇ ಇಲ್ಲ. ಹೀಗಿದ್ದೂ ಬಾಂಬ್ ಇಟ್ಟಿರುವ ಬಗ್ಗೆ ನಮಗೂ ಅನುಮಾನ ವ್ಯಕ್ತವಾಯಿತು ಎಂದು ಆನಂತರ ಪೊಲೀಸರು ತಿಳಿಸಿದರು.
ನಂತರ ಗರುಡ ಮಾಲ್ ಸಮೀಪ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆಗಳು ಬಂದಿವೆ. ಅವು ಹುಸಿ ಬಾಂಬ್ಗಳೆಂದು ನಂತರ ದೃಢಪಟ್ಟಿತು. ಭಾನುವಾರ ಬೆಳಗ್ಗೆ 10 ಗಂಟೆಗೆ ಪೊಲೀಸ್ ನಿಯಂತ್ರಣ ಕಚೇರಿಗೆ ಕರೆ ಮಾಡಿದ ವ್ಯಕ್ತಿ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲೂ ಬಾಂಬ್ ಇಟ್ಟಿರುವುದಾಗಿ ತಿಳಿಸಿ ಕರೆ ಸ್ಥಗಿತಗೊಳಿಸಿದ. ಇದರಿಂದ ಆಸ್ಪತ್ರೆಯಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ಉಂಟಾಯಿತು. ರೋಗಿಗಳು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಯಾವ ಕ್ಷಣದಲ್ಲಿ ಏನಾಗುತ್ತದೋ ಏನೋ ಎಂದು ಕೈಯಲ್ಲಿ ಜೀವ ಹಿಡಿದು ಆಸ್ಪತ್ರೆಯಿಂದ ಹೊರ ಬಂದಿದ್ದರು. 11ಗಂಟೆಗೆ ಆಸ್ಪತ್ರೆಗೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿತು. ಆದರೆ ಅಲ್ಲಿ ಬಾಂಬ್ ಪತ್ತೆಯಾಗಲಿಲ್ಲ.
ಗರುಡಾ ಮಾಲ್ ಬಳಿ ತಪಾಸಣೆ ಮಾಡಿದಾಗ ಅಲ್ಲಿಯೂ ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ಭಾನುವಾರಗಳಂದು ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಗರುಡಾ ಮಾಲಾ ಬೆದರಿಕೆ ಕರೆಬಂದ ಹಿನ್ನಲೆಯಲ್ಲಿ ಬಿಕೋ ಎನ್ನುತ್ತಿತ್ತು. ಸರಣಿ ಬಾಂಬ್ ಸ್ಫೋಟದ ಲಾಭ ಪಡೆಯಲು ದುಷ್ಕರ್ಮಿಗಳು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವುದೇ ಇವರ ಉದ್ದೇಶ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)
ಸರಣಿ
ಸ್ಫೋಟ
:ರಾಷ್ಟ್ರದಾದ್ಯಂತ
ಭಾರಿ
ಕಣ್ಗಾವಲು
ಬಾಂಬ್
ಸ್ಫೋಟ:
ಸುಳಿವು
ನೀಡಿದವರಿಗೆ
ಲಕ್ಷ
ರು.
ಬಹುಮಾನ