ಐಐಟಿ ಸ್ಥಾಪಿಸಲು ಪ್ರಧಾನಿಗೆ ಯಡಿಯೂರಪ್ಪ ಪತ್ರ
ಬೆಂಗಳೂರು, ಜು. 24 : ಕರ್ನಾಟಕ ಸಾಫ್ಟವೇರ್ ತಂತ್ರಜ್ಞರ ಕೇಂದ್ರವಾಗಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಭಾರತೀಯ ತಾಂತ್ರಿಕ ಮಹಾವಿದ್ಯಾಲಯವೊಂದನ್ನು (ಐಐಟಿ) ಆರಂಭಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಪ್ರಧಾನಮಂತ್ರಿ ಅವರನ್ನು ಮನವಿ ಮಾಡಿಕೊಂಡಿದ್ದಾರೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ. ದೇಶದ ಸಾಫ್ಟವೇರ್ ಉದ್ಯಮದಲ್ಲಿ ಬೆಂಗಳೂರಿನ ಕೊಡುಗೆ ಅಪಾರ. ಜಾಗತಿಕ ಮಟ್ಟದಲ್ಲಿ ಕೂಡಾ ತನ್ನ ಹಿರಿಮೆಯನ್ನು ಮೆರೆದಿದೆ. ಜೊತೆಗೆ ಜೈವಿಕ ತಂತ್ರಜ್ಞಾನ, ಸಾಪ್ಟ್ವೇರ್ ತಂತ್ರಜ್ಞಾನ ಹಾಗೂ ಈ ಉದ್ಯಮಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಹಾಗೂ 100 ರಷ್ಟು ಜಾಗತಿಕ ಕಂಪನಿಗಳು ಇಲ್ಲಿ ನೆಲೆನಿಂತಿವೆ. ಈ ಹಿನ್ನಲೆಯಲ್ಲಿ ಉತ್ತಮ ಗುಣಮಟ್ಟದಿಂದ ಕೂಡಿದ ಮಾನವ ಸಂಪನ್ಮೂಲ ಅಗತ್ಯವಾಗಿದ್ದು, ತಂತ್ರಜ್ಞರನ್ನು ತಯಾರಿಸುವ ಐಐಟಿಯಂಥ ಪ್ರತಿಷ್ಠಿತ ಸಂಸ್ಥೆಯನ್ನು ಇಲ್ಲಿ ಆರಂಭವಾಗಬೇಕಿರುವುದು ಅತ್ಯಗತ್ಯವಾಗಿದೆ. ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅನೇಕ ಭಾರಿ ಮನವಿ ಮಾಡಿಕೊಳ್ಳಲಾಗಿದೆ. ಅಲ್ಲದೇ ರಾಜ್ಯಪಾಲ ರಾಮೇಶ್ವರ ಠಾಕೂರ್ ಮೂಲಕವೂ ನಮ್ಮ ಬೇಡಿಕೆಯನ್ನು ನಿವೇದಿಸಿಕೊಳ್ಳಲಾಗಿದೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕದ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಯಡಿಯೂರಪ್ಪ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
11 ಪಂಚವಾರ್ಷಿಕ ಯೋಜನೆಯಲ್ಲಿ ಕರ್ನಾಟಕಕ್ಕೆ ಐಐಟಿಯನ್ನು ಮಂಜೂರ ಮಾಡಿ, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಆರಂಭಿಸುವಂತೆ ಪ್ರಧಾನಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ. ಆದರೆ 2008-09 ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಬಹುದಿನದ ಬೇಡಿಕೆಯಾದ ಐಐಟಿ ನೀಡುವ ಬೇಡಿಕೆಗೆ ಮಾನ್ಯತೆ ಸಿಕ್ಕಿಲ್ಲ. ಇದು ಅಶ್ಚರ್ಯಕರ ಸಂಗತಿಯಾಗಿದೆ. ಕರ್ನಾಟಕ ಬೆಳವಣಿಗೆಗೆ ಕೇಂದ್ರ ಏಕೆ ಅಡ್ಡಗಾಲ ಹಾಕುತ್ತಿದೆ ಎನ್ನುವುದು ತಿಳಿಯದಾಗಿದೆ ಎಂದಿರುವ ಯಡಿಯೂರಪ್ಪ, ಮಲತಾಯಿ ಧೋರಣೆಯನ್ನು ಕೈಬಿಟ್ಟು ಕನ್ನಡಿಗರ ಆಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications