ಕೇಂದ್ರದಿಂದ ಹಿಂದುಗಳ ಭಾವನೆಗೆ ಕೊಡಲಿಯೇಟು
ನವದೆಹಲಿ, ಜು. 24 : ಸೇತುಸಮುದ್ರಂ ಯೋಜನಾ ಪ್ರದೇಶದಲ್ಲಿ ರಾಮಸೇತುವೆ ಎಂಬುದೇ ಇಲ್ಲವೇ ಇಲ್ಲ. ಅದನ್ನು ರಾಮಾಯಣ ಕಾಲದಲ್ಲಿ ಶ್ರೀರಾಮನೇ ಧ್ವಂಸಗೊಳಿಸಿದ್ದಾನೆ ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಸಲ್ಲಿಸಿದ ಅಫಿಡವಿಟ್ ಗೆ ಭಾರತೀಯ ಜನತಾ ಪಕ್ಷ ತೀವ್ರವಾಗಿ ವಿರೋಧಿಸಿದೆ. ನೂರು ಕೋಟಿ ಹಿಂದುಗಳ ಭಾವನೆಗಳಿಗೆ ಯುಪಿಎ ಸರ್ಕಾರ ಕೊಡಲಿ ಏಟು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ವಿಜಯಕುಮಾರ್ ಮಲ್ಹೋತ್ರಾ, ಕೇಂದ್ರ ಸರ್ಕಾರ ರಾಮಸೇತು ವಿಷಯದಲ್ಲಿ ಹುಡುಗಾಟಿಕೆ ನಡೆಸಿದೆ. ಮುಂದಿನ ಚುನಾವಣೆಯಲ್ಲಿ ಇದಕ್ಕೆ ತಕ್ಕ ಬೆಲೆ ತೆರೆಲಿದೆ ಎಂದರು. ತಮಿಳುನಾಡಿನ ಡಿಎಂಕೆ ಸರ್ಕಾರ ತಳೆದಿರುವ ನಿಲುವಿಗೆ ಕೇಂದ್ರ ಕುಣಿಯುತ್ತಿದ್ದು, ಇದರಿಂದಾಗಿ ಭಾರತೀಯ ಹಿಂದುಗಳ ಭಾವನೆಯನ್ನು ಕೆರಳಿಸಿದಂತಾಗಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಯುಪಿಎ ಸರ್ಕಾರಕ್ಕೆ ಗೊತ್ತಾಗಲಿದೆ ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ನಲ್ಲಿ ಸಲ್ಲಿಸಿರುವ ಅಫಿಡವಿಟ್ ನ ಕ್ರಮವನ್ನು ಖಂಡಿಸಿ ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದ ಅವರು, ಹಿಂದುಗಳ ವಿರೋಧಿಯಾಗಿರುವ ಈ ಯೋಜನೆಯನ್ನು ಯಾವ ಕಾರಣಕ್ಕೂ ಮುಂದುವರೆಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದರು. ರಾಮಸೇತು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರಿಂಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಸರ್ಕಾರದ ಪರವಾಗಿ ಖ್ಯಾತ ನ್ಯಾಯವಾದಿ ಫಾಲಿ ನಾರಿಮನ್ ವಾದಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ರಾಮಸೇತು ಧ್ವಂಸ ಮಾಡಿದ್ದು ಸಾಕ್ಷಾತ್ ಶ್ರೀರಾಮ