ಯುಪಿಎಗೆ ಬೆಂಬಲ; ಜೆಡಿಎಸ್ ಮಹತ್ವದ ಸಭೆ ಇಂದು
ಬೆಂಗಳೂರು, ಜು. 18 : ಅಣುಬಂಧ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡ ಪರಿಣಾಮ ಜು. 22 ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿ ಮಂಡಿಸಬೇಕಿರುವ ಹಿನ್ನಲೆಯಲ್ಲಿ ಮೂರು ಸಂಸದರನ್ನು ಹೊಂದಿರುವ ಜೆಡಿಎಸ್ ಯಾರ ಪರ ಮತ ಚಲಾಯಿಸಬೇಕು ಎನ್ನುವುದನ್ನು ನಿರ್ಧರಿಸಲು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಇಂದು ಸಭೆ ಕರೆದಿದ್ದಾರೆ.
ಪಕ್ಷದ ಹಿರಿಯರು ಸಭೆಯಲ್ಲಿ ಪಾಲ್ಗೊಂಡಿದ್ದು, ಯುಪಿಎಗೆ ಮತ ಚಲಾಯಿಸಿದರೆ ಮುಂದಿನ ಲಾಭನಷ್ಟದ ರಾಜಕೀಯ ಲೆಕ್ಕಾಚಾರದಲ್ಲಿ ಮುಖಂಡರು ಮುಳುಗಿದ್ದಾರೆ. ಈಗಾಗಲೇ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ದೇವೇಗೌಡರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಯುಪಿಎಗೆ ಪರ ಮತ ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ದೇವೇಗೌಡರು ಸ್ಪಷ್ಟ ಭರವಸೆ ನೀಡಿಲ್ಲವಾದರೂ ಅವರ ಒಲವು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಎನ್ನುವುದು ಗುಟ್ಟಾಗಿಯೇನು ಉಳಿದಿಲ್ಲ.
ಇನ್ನೊಂದು ಮೂಲಗಳ ಪ್ರಕಾರ ಕೇವಲ ಮೂರು ಸ್ಥಾನ ಹೊಂದಿರುವ ಜೆಡಿಎಸ್ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಈಗಾಗಲೇ ಕೇಂದ್ರ ಮಾಜಿ ಸಚಿವ ಶಿಬು ಸೋರೇನ್ ಕೂಡಾ ಕಲ್ಲಿದ್ದಲು ಸಚಿವರಾಗಿದ್ದರು. ಪ್ರಕರಣವೊಂದರಲ್ಲಿ ಆರೋಪಿಯಾಗಿ ಶಿಕ್ಷೆಗೆ ಗುರಿಯಾಗಿದ್ದ ಹಿನ್ನಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಅವರು ಕೂಡಾ ತಮ್ಮನ್ನು ಸಚಿವರನ್ನಾಗಿಸಿದರೆ ಮಾತ್ರ ಯುಪಿಎಗೆ ಮತ ಎಂದು ಪಟ್ಟಹಿಡಿದಿದ್ದಾರೆ. ಜತೆಗೆ ಅವರ ಪುತ್ರನನ್ನು ಉಪಮುಖ್ಯಮಂತ್ರಿ ಮಾಡಬೇಕು ಎನ್ನುವ ಷರತ್ತು ವಿಧಿಸಿದ್ದಾರೆ. ಕಾಂಗ್ರೆಸ್ ಪಕ್ಷ ಇದೀಗ ಅನಿವಾರ್ಯ ಸ್ಥಿತಿಯಲ್ಲಿದ್ದು ಷರತ್ತಿಗೆ ಸಹಮತ ಸೂಚಿಸಿದೆ.
ಮುಂಬರುವ ಉಪಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ದೇವೇಗೌಡರು ಕಾಂಗ್ರೆಸ್ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಒಪ್ಪಿದರೆ ಮಾತ್ರ ಯುಪಿಎಗೆ ಮತ ಎಂದು ಕೂಡಾ ಹೇಳಿದ್ದರು. ನಂತರದ ದಿನಗಳಲ್ಲಿ ಯುಪಿಎಗೆ ಮತ ನೀಡಿದರೆ ರಾಜ್ಯ ಕಾಂಗ್ರೆಸ್ ಹೋಳಾಗಲಿದೆ. ಈ ಆರೋಪವನ್ನು ನಾನ್ಯಾಕೆ ಹೊತ್ತುಕೊಳ್ಳಲಿ ಎಂದು ಹೇಳಿದ್ದರು. ಒಟ್ಟಿನಲ್ಲಿ ಜು. 18 ರಂದು ಪಕ್ಷದ ಸಭೆ ನಡೆಸಿ ಯುಪಿಎಗೆ ಮತ ನೀಡುವು ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದ್ದರು. ದೇವೇಗೌಡರು ಇಂದು ತಗೆದುಕೊಳ್ಳುವ ನಿರ್ಧಾರಕ್ಕೆ ಭಾರಿ ಮಹತ್ವವಿದೆ ಎಂದು ಉಹಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)