ಅಭ್ಯಾಸ ಪಂದ್ಯ ಗೆಲ್ಲುವ ಉತ್ಸಾಹದಲ್ಲಿ ಕುಂಬ್ಳೆ ಪಡೆ
ಕೊಲಂಬೊ, ಜು.18: ಭಾರತ ಹಾಗೂ ಶ್ರೀಲಂಕಾ ಮಂಡಳಿ ಇಲೆವೆನ್ ತಂಡಗಳ ನಡುವೆ ಮೂರು ದಿನದ ಅಭ್ಯಾಸ ಪಂದ್ಯ ಶುಕ್ರವಾರ ಆರಂಭವಾಗಿದ್ದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿ ಅನಿಲ್ ಕುಂಬ್ಳೆ ಬಳಗ ಇದೆ.
ಜೆಹಾನ್ ಮುಬಾರಕ್ ನೇತೃತ್ವದ ಮಂಡಳಿ ಇಲೆವೆನ್ ತಂಡ ಉತ್ತಮ ಆಟಗಾರರನ್ನು ಒಳಗೊಂಡಿದ್ದು ಭಾರತಕ್ಕೆ ಪ್ರಬಲ ಪೈಪೋಟಿ ನೀಡಲಿದೆ. ಆದರೆ ಕುಂಬ್ಳೆ ಪಡೆ ಹೇಗಾದರೂ ಮಾಡಿ ಶ್ರೀಲಂಕಾ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸುವ ಗುರಿಯನ್ನು ಹೊಂದಿದೆ. ಕೊಲಂಬೊದಲ್ಲಿನ ಎನ್ಸಿಸಿ ಕ್ರೀಡಾಂಗಣ ಅಭ್ಯಾಸ ಪಂದ್ಯಕ್ಕೆ ಸಂಪೂರ್ಣವಾಗಿ ಸಜ್ಜಾಗಿದೆ.
ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜುಲೈ 23ಕ್ಕೆ ಆರಂಭವಾಗಲಿದೆ. ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅನಿಲ್ ಕುಂಬ್ಳೆ ಬಳಗ ಲಂಕಾ ಸರಣಿಯ ಗೆಲುವಿನ ಕನಸಿನಲ್ಲಿದೆ. ಹಾಗಾಗಿ ಈ ಅಭ್ಯಾಸ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಗಂಗೂಲಿ, ಅನಿಲ್ ಕುಂಬ್ಳೆ, ಜಹೀರ್ ಖಾನ್ ಮತ್ತು ಲಕ್ಷ್ಮಣ್ ಅಭ್ಯಾಸ ಪಂದ್ಯವನ್ನು ಆಡಿ ಸರಣಿಗೆ ಸಿದ್ಧವಾಗಲಿದ್ದಾರೆ.
(ದಟ್ಸ್ಕನ್ನ್ನಡ ವಾರ್ತೆ)