ಕೊಚ್ಚಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ರೈತ
ಬಿಜಾಪುರ, ಜು.14: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಸೇರಿದಂತೆ ಇಬ್ಬರು ಪುತ್ರರನ್ನು ಕೊಚ್ಚಿ ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಸಿಂಧಗಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.
ಬಸವರಾಜ್ ಸಿದ್ದಪ್ಪ ಬಿರಾದಾರ್ (42) ತನ್ನ ಪತ್ನಿ ಬಸಮ್ಮ (35) ಹಾಗೂ ಪುತ್ರರಾದ ಸಂತೋಷ್(12) ಮತ್ತು ಮಹೇಶ್(07)ರನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿ ಅದೇ ಕುಡುಗೋಲಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಲೆಯಾಗಬೇಕಿದ್ದ ಆತನ 16 ವರ್ಷದ ಮಗಳು ಸವಿತಾ ಹೇಗೋ ಪಾರಾಗಿ ಜೀವ ಉಳಿಸಿಕೊಂಡಿದ್ದಾಳೆ. ಆಕೆಗೆ ಕಾಲಿಗೆ ತೀವ್ರವಾಗಿ ಗಾಯವಾಗಿದ್ದು ಮೂರು ಕೈ ಬೆರಳುಗಳು ತುಂಡಾಗಿವೆ. ಹುಡುಗನೊಬ್ಬನೊಂದಿಗೆ ಈಕೆ ಮಾತನಾಡುತ್ತಿದ್ದುದನ್ನು ಕಂಡು ಬಿರಾದಾರ್ ಕುಪಿತಗೊಂಡಿದ್ದ. ಈ ವಿಚಾರವಾಗಿ ಮನೆಯಲ್ಲೂ ಗಲಾಟೆ ಮಾಡಿದ್ದ. ಇದನ್ನು ಆತನ ಪತ್ನಿ ತೀಕ್ಷ್ಣವಾಗಿ ಆಕ್ಷೇಪಿಸಿದ್ದಳು . ಇದರಿಂದ ಮತ್ತಷ್ಟು ಕೋಪಗೊಂಡ ಬಿರಾದಾರ್ ಈ ಘಟನೆಗೆ ಮುಂದಾದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸವಿತಾ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 72 ಎಕರೆ ಫಲವತ್ತಾದ ಜಮೀನನ್ನು ಹೊಂದಿರುವ ಬಿರಾದಾರ್ ಕ್ಷುಲ್ಲಕ ಕಾರಣಕ್ಕೆ ತನ್ನ ಹಾಗೂ ಕುಟುಂಬದವರ ಸಾವಿಗೆ ಏಕೆ ಕಾರಣನಾದ ಎಂಬುದು ಊರಿನವರಿಗೆ ಹಾಗೂ ಪೊಲೀಸರಿಗೆ ಇನ್ನೂ ರಹಸ್ಯವಾಗಿ ಉಳಿದಿದೆ.
(ದಟ್ಸ್ಕನ್ನಡ ವಾರ್ತೆ)