ಕೆ.ವಿ.ಅಕ್ಷರರ ಪ್ರಮಾಣವೆಂಬುದು ಪ್ರಮಾಣ ನಾಟಕ
ಬೆಂಗಳೂರು, ಜು. 8 : ಖ್ಯಾತ ನಾಟಕಕಾರ ಷೇಕ್ಸ್ ಪಿಯರ್ ನ "measure for measure" ನಾಟಕದ ಕನ್ನಡದ ಪ್ರಯೋಗವಾದ 'ಪ್ರಮಾಣವೆಂಬುದು ಪ್ರಮಾಣವೇ'ನಾಟಕ ಜು. 8 ಮತ್ತು 9 ರಂದು ಜೆ.ಪಿ.ನಗರದ ರಂಗಶಂಕರದಲ್ಲಿ ನಡೆಯಲಿದೆ. ರಂಗಸಿರಿ ತಂಡ ಅಭಿನಯಿಸುತ್ತಿರುವ ಈ ನಾಟಕವನ್ನು ರಂಗಕರ್ಮಿ ಕೆ.ವಿ.ಅಕ್ಷರ ಕನ್ನಡಕ್ಕೆ ಅನುವಾದಿಸಿದ್ದು ನಟರಾಜ್ ಹೊನ್ನವಳ್ಳಿ ನಿರ್ದೇಶಿಸಿದ್ದಾರೆ.
ಎರಡೂ ದಿನ ಸಂಜೆ 7.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ. ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡ ರಂಗ ತಂಡವಾದ ರಂಗಸಿರಿ ಈಗಾಗಲೇ ಸಾಕಷ್ಟು ನಾಟಕಗಳನ್ನು ಪ್ರದರ್ಶಿಸಿರುವ ಮೂಲಕ ಜನಪ್ರಿಯವಾಗಿದೆ. ಇದೀಗ ಪ್ರಮಾಣವೆಂಬುದು ಪ್ರಮಾಣವೇ ನಾಟಕದ ಮೂಲಕ ವೀಕ್ಷಕರನ್ನು ರಂಜಿಸಲು ಮುಂದಾಗಿದೆ.
ಬಹುಪಾಲು ಇಂಜನಿಯರಿಂಗ್ ವಿದ್ಯಾರ್ಥಿಗಳನ್ನು ಒಳಗೊಂಡಿರುವ ತಂಡವು ಪ್ರತಿ ರಜೆಯಲ್ಲಿ ಹೊಸ ನಾಟಕವನನ್ನು ಪ್ರಯೋಗಿಸುವ ಹವ್ಯಾಸವನ್ನು ರೂಢಿಸಿಕೊಂಡು ಬಂದಿದೆ. ಈಗಾಗಲೇ ಪ್ರೇಮ ಚೂರ್ಣ, ಕಾನೀನಾ, ಅನ್ವೇಷಕರು, ಬಾಕಿ ಇತಿಹಾಸ, ದಂಗೆಯ ಮುಂಚಿನ ದಿನಗಳು ಸೇರಿದಂತೆ ಹಲವಾರು ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ.
ಶಾಲಾ ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿ ಮೂಡಿಸಲು 'ರಂಗಸಿರಿ 'ನಡೆಯುತ್ತಿರುವ ಹಾಸ್ಯ ಸಂಭ್ರಮ ಎಂಬ ನಗೆಭರಿತ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆಯುತ್ತಿದ್ದು, ಈಗಾಗಲೇ ಸುಮಾರು 15 ಶಾಲೆಗಳಲ್ಲಿ ಪ್ರದರ್ಶನ ಕಂಡಿವೆ. ರಂಗಸಿರಿ 5 ನೇ ವರ್ಷಾಚರಣೆ ಸಂಭ್ರಮದಲ್ಲಿದ್ದು, ರಂಗಪಂಚಮಿ ನಾಟಕೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದೆ.
ಬಹುಮುಖ್ಯವಾಗಿ ಈಚೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಏಡ್ಸ್ ಬಗೆಗಿನ ಜಾಗೃತಿಗಾಗಿ ಬ್ಲಾಕ್ ಅಂಡ್ ವೈಟ್ ಎಂಬ ನಾಟಕ ಸಿದ್ಧಪಡಿಸಿ, ಪ್ರದರ್ಶಿಸಿ ಅಪಾರ ಜನಮನ್ನಣೆ ಗಳಿಸಿತ್ತು. ಅನಾಥಶ್ರಮ ಮತ್ತು ವೃದ್ಧಾಶ್ರಮಗಳಲ್ಲಿ ನಿಮ್ಮೊಂದಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರದರ್ಶಿಸುತ್ತಾ ಬಂದಿದೆ.
(ದಟ್ಸ್ ಕನ್ನಡ ಸಭೆ ಸಮಾರಂಭ)