ಸಂಪುಟ ವಿಸ್ತರಣೆಗೆ ಮುಂದಾದ ಯಡಿಯೂರಪ್ಪ
ಬೆಂಗಳೂರು, ಜು. 7 : ಕ್ಷಿಪ್ರ ಕಾರ್ಯಚರಣೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ಹಿನ್ನಲೆಯಲ್ಲಿ ಬುಧವಾರ ಇಲ್ಲವೆ ಗುರುವಾರ ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳಿವೆ.ಮೊದಲ ಕಂತಿನಲ್ಲಿ ಬಿಜೆಪಿ ಸೇರಿರುವ ಮೂವರು ಶಾಸಕರಿಗೆ ಸಚಿವ ಸ್ಥಾನದ ದೊರೆಯುವ ನಿರೀಕ್ಷೆಯಿದೆ. ಬಾಲಚಂದ್ರ ಜಾರಕಿಹೊಳೆ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ಸಿಗಲಿದೆ ಎನ್ನಲಾಗಿದೆ.
ಜು. 17ರ ಬಜೆಟ್ ಅಧಿವೇಶನದ ಒಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಒಂದು ಮೂಲಕ ಪ್ರಕಾರ ಜೆಡಿಎಸ್ ಶಾಸಕರಾದ ಉಮೇಶ್ ಕತ್ತಿ, ಚಿಕ್ಕನಾಯಕಹಳ್ಳಿಯ ಸುರೇಶ್ ಬಾಬು, ಗುಬ್ಬಿ ಶಾಸಕ ಎಸ್.ಆರ್.ಶ್ರಿನಿವಾಸ್, ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಕಾಂಗ್ರೆಸ್ ನ ಗುರುಪಾದಪ್ಪ ನಾಗಮಾರಪಲ್ಲಿ, ಗೋವಿಂದ ರಾಜ ನಗರದ ವಿ.ಸೋಮಣ್ಣ, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಟಿ.ನರಸೀಪುರದ ಮಹದೇವ್ ಪ್ರಸಾದ್, ತುರುವೇಕೆರೆಯ ಜಗ್ಗೇಶ್, ಪಿರಿಯಾಪಟ್ಟಣದ ಕೆ.ವೆಂಕಟೇಶ್ ಬಿಜೆಪಿ ಸೇರುವ ಸಾಧ್ಯತೆಗಳಿವೆ. ಈ ಎಲ್ಲ ಶಾಸಕರು ಸಚಿವರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಜತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಐದು ವರ್ಷಗಳ ಕಾಲ ಆಡಳಿತ ನಡೆಸುವ ನಿಟ್ಟಿನಲ್ಲಿ ಈ ಕಾರ್ಯಚರಣೆ ನಡೆಸಿದೆ. ಮುಂದಿನ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಯಕರು ಈ ಮೂಲಕ ಹೆಚ್ಚು ಸಂಸದರನ್ನು ಆಯ್ಕೆ ಮಾಡುವ ಮೂಲಕ ಎನ್ ಡಿಎ ಕೈ ಬಲಪಡಿಸುವ ಪ್ರಯತ್ನ ಇದಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗೂಡಿ ಪಕ್ಷೇತರ ಶಾಸಕರನ್ನು ಸೆಳೆದು ಸರ್ಕಾರ ಉರುಳಿಸಲು ತಂತ್ರ ರೂಪಿಸಿದ್ದರು ಎನ್ನಲಾಗಿದ್ದು, ಅದಕ್ಕೂ ಮುಂಚೆ ಬಿಜೆಪಿ ಪ್ರತಿಪಕ್ಷಗಳ ಶಾಸಕನ್ನು ಸೆಳೆಯಲು ಯಶಸ್ವಿಯಾಗಿದ್ದಾರೆ.
ಸಿದ್ದು ಬಿಜೆಪಿ ತೆಕ್ಕೆಗೆ?
ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನಮಾನ ದೊರೆಯದಿದ್ದಕ್ಕೆ ತೀವ್ರ ಅಸಮಧಾನಗೊಂಡಿರುವ ಮಾಜಿ ಉಪಮಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡಾ ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದಲ್ಲಿ ಕೇಂದ್ರ ಸಚಿವರನ್ನಾಗಿ ಮಾಡುವ ಭರವಸೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ ಎನ್ನಲಾಗಿದೆ. ಸಿದ್ದು ಪಕ್ಷಕ್ಕೆ ಬಂದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ತನ್ನ ಬಲ ಗಟ್ಟಿಗೊಳಿಸಲು ಸಹಯಕಾರಿಯಾಗಲಿದೆ ಎನ್ನುವುದು ಬಿಜೆಪಿ ವರಿಷ್ಠರ ಚಿಂತನೆಯಾಗಿದೆ ಎಂದು ಗೊತ್ತಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಇನ್ನಷ್ಟು ಶಾಸಕರ ಸೇರ್ಪಡೆ ನಿರೀಕ್ಷೆಯಲ್ಲಿ ಬಿಜೆಪಿ
ಕಾಂಗ್ರೆಸ್, ಜೆಡಿಎಸ್ ನ ಇಬ್ಬರು ಶಾಸಕರು ಬಿಜೆಪಿಗೆ












Click it and Unblock the Notifications