ಸಿಲೆಂಡರ್ ಸ್ಫೋಟದ ಆರೋಪಿ ಮನೋಜ್ ಪರಾರಿ
ಬೆಂಗಳೂರು, ಜು. 7 : ಭಾನುವಾರ ಸಂಜೆ ನಗರದ ಸಾರಕ್ಕಿ ಬಳಿ ನಡೆದ ಸಿಲೆಂಡರ್ ಸ್ಫೋಟದ ಮುಖ್ಯ ಆರೋಪಿ ಮನೋಜ್ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾನೆ. ಸ್ಫೋಟದ ಹಿನ್ನಲೆಯಲ್ಲಿ ಮನೋಜ್ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸೋಮವಾರ ಬೆಳಗ್ಗೆ ಆತ ಪೊಲೀಸರ ಕಣ್ಣು ತಪ್ಪಿಸಿ ಆಸ್ಪತ್ರೆಯಿಂದ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಹಿನ್ನಲೆ
ಬಲೂನ್ ಗೆ ಗಾಳಿ ತುಂಬಿಸುವ ಸಿಲೆಂಡರ್ ಸ್ಫೋಟಗೊಂಡು ಇಬ್ಬರು ಬಾಲಕರು ಮೃತಪಟ್ಟು ಆರು ಬಾಲಕರು ಮತ್ತು ಬಲೂನ್ ಮಾರಾಟಗಾರ ಸೇರಿ ಏಳು ಮಂದಿ ಗಾಯಗೊಂಡ ಘಟನೆ ಜೆಪಿ ನಗರದ ಸಮೀಪ ಸಾರಕ್ಕಿ ಸಾರ್ಡನ್ ಬಳಿ ಭಾನುವಾರ ಸಂಜೆ ನಡೆದಿತ್ತು..
ಸಾರಕ್ಕಿ ಗಾರ್ಡನ್ , ಪುಟ್ಟೇನಹಳ್ಳಿ ನಿವಾಸಿಗಳಾದ ನಾಗರಾಜ್(14) ಮತ್ತು ಸಂಜಯ್ ಗುಪ್ತ(11) ಮತಪಟ್ಟವರು. ಅಂಜುಮ್(13), ಮಂಜುನಾಥ್(7), ವಿಕಾಸ್(12), ನವೀನಕುಮಾರ್(13) ನಗರದ ವಿಕ್ಟೋರಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದ ಅಮನ್ ದುಬೆ(7) ಮತ್ತು ಇನ್ನೊಬ್ಬ ಬಾಲಕ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಉತ್ತರ ಭಾರತ ಮೂಲದ ಬಲೂನ್ ಮಾರಾಟಗಾರ ಮನೋಜ್(18) ಸಹ ಗಾಯಗೊಂಡಿದ್ದರಿಂದ ಮೊದಲು ಹತ್ತಿರದ ರಾಜಶೇಖರ್ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಜಯನಗರ ಸರ್ಕಾರಿ ಆಸ್ಪತ್ರೆಗೆ , ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಬೆಳಗ್ಗೆ ಆಸ್ಪತ್ರೆಯಿಂದ ಮನೋ ಜ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)