ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿ ಹೋರಾಟ
ನವದೆಹಲಿ, ಜು. 5 : ನಾಗರಿಕ ಪರಮಾಣು ಒಪ್ಪಂದ ಕಗ್ಗಂಟಾಗಿರುವ ಹಿನ್ನಲೆಯಲ್ಲಿ ಯುಪಿಎ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ಮುಂದಾಗಿರುವ ಸಮಾಜವಾದಿ ಪಕ್ಷದ ಜತೆಗೆ ಉತ್ತರ ಪ್ರದೇಶದಲ್ಲೂ ಕೂಡಾ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ.
ಎಡಪಕ್ಷಗಳು ಕೇಂದ್ರ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವುದು ಬಹುತೇಕ ನಿಶ್ಚಯವಾಗಿದ್ದು, ದೇಶದ ಹಿತದೃಷ್ಟಿ ಕಾಯಲು ಯುಪಿಎ ಸರ್ಕಾರವನ್ನು ಬೆಂಬಲಿಸಲು ಸಿದ್ಧ ಎಂದಿರುವ ಮುಲಾಯಂ ಸಿಂಗ್ ಅವರ ರಾಜಕೀಯ ನಡೆ ಮಹತ್ವದ್ದಾಗಿದೆ. ಈ ಬೆಂಬಲ ಮುಂದಿನ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುಂದುವರೆಯಲಿದೆ ಎಂದು ಕೇಳಿ ಬಂದಿರುವ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಈ ಮಾತನ್ನು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷಕ್ಕೆ ಒಂದರ್ಥದಲ್ಲಿ ತವರು ನೆಲವಿದ್ದಂತೆ. ಗಾಂಧಿ, ನೆಹರು ಕಾಲದಲ್ಲಿಯೂ ಇಲ್ಲಿಯ ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದ್ದರಿಂದ ರಾಜ್ಯದ ಮಟ್ಟಿಗೆ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಟ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಈ ಮೂಲಕ ರಾಜ್ಯದಲ್ಲಿಯೂ ಕಾಂಗ್ರೆಸ್ ಸಮಾಜವಾದಿ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎನ್ನುವ ಗಾಳಿ ಸುದ್ದಿಗೆ ತಿಲಾಂಜಲಿ ನೀಡಿದರು.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹೊಂದಾಣಿಕೆ ವಿಷಯವನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಎಸ್ಪಿ ಮುಖಂಡ ಅಮರ್ ಸಿಂಗ್ ಆ ಬಗ್ಗೆ ನಮ್ಮ ಮುಂದೆ ಯಾವ ಚಿಂತನೆ ಇಲ್ಲ. ನಮ್ಮ ಆಸಕ್ತಿ ಏನಿದ್ದರೂ ಕೇಂದ್ರ ಸರ್ಕಾರ ಉಳಿಸುವ ಬಗ್ಗೆ, ದೇಶದ ಹಿತಕ್ಕೆ ಮುಖ್ಯವಾಗಿರುವ ಅಣುಬಂಧವನ್ನು ಅನುಷ್ಠಾನಗೊಳಿಸುವುದು ನಮ್ಮ ಆದ್ಯತೆಯಾಗಿದೆ.ಎಸ್ಪಿ ನಿಲುವು ಕುರಿತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜತೆ ಮಾತನಾಡಲಾಗಿದೆ ಎಂದು ಅಮರ್ ಸಿಂಗ್ ಹೇಳಿದರು. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ಬದ್ಧ ಎದುರಾಳಿ ಬಹುಜನ ಸಮಾಜವಾದಿ ಪಕ್ಷವನ್ನು ಬಗ್ಗು ಬಡಿಯಲು ಈ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳಲಿವೆ ಎಂದು ಸುದ್ದಿ ಎಲ್ಲಡೆ ಹಬ್ಬಿತ್ತು.
(ಏಜೆನ್ಸೀಸ್)