ಪ್ರಧಾನಿ ವಿಶ್ವಾಸಮತ ಯಾಚಿಸಲು ಆಡ್ವಾಣಿ ಆಗ್ರಹ
ನವದೆಹಲಿ, ಜು. 5 : ಅಭದ್ರತೆಯ ಸುಳಿಯಲ್ಲಿ ಸಿಲುಕಿರುವ ಕೇಂದ್ರ ಯುಪಿಎ ಸರ್ಕಾರ ವಿಶ್ವಾಸಮತ ಕಳೆದುಕೊಂಡಿದೆ. ಆದ್ದರಿಂದ ಕೂಡಲೇ ತುರ್ತು ಅಧಿವೇಶನ ಕರೆದು ವಿಶ್ವಾಸಮತ ಯಾಚಿಸಬೇಕು ಎಂದು ಬಿಜೆಪಿ ಮುಖಂಡ, ಹಾಗೂ ವಿರೋಧ ಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಮಾಣು ಒಪ್ಪಂದ ಬಿಕ್ಕಟ್ಟಿನಲ್ಲಿ ಲೋಕಸಭೆ ಅತಂತ್ರವಾಗಿದೆ. ಸರ್ಕಾರದ ಆಧಾರ ಸ್ಥಂಭವಾಗಿದ್ದ ಎಡಪಕ್ಷಗಳು ಯುಪಿಎ ಸರ್ಕಾರಕ್ಕೆ ಕೈಕೊಟ್ಟಿವೆ ಆದ್ದರಿಂದ ಕೂಡಲೇ ವಿಶ್ವಾಸಮತ ಯಾಚಿಸುವುದು ಅಗತ್ಯವಾಗಿದೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಈ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಯುಪಿಎ ಸರ್ಕಾರ ದೇಶ ಕಂಡ ಅತ್ಯಂತ ದುರ್ಬಲ ಸರ್ಕಾರ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಗೋಡೆ ಎನ್ನಲಾದ ನಾಲ್ಕು ಎಡಪಕ್ಷಗಳು ಬಹುತೇಕ ಸರ್ಕಾರದಿಂದ ಹೊರಹೋಗಿವೆ. ಸರ್ಕಾರ ಅಗತ್ಯ ಸಂಖ್ಯಾಬಲದ ಕೊರತೆಯನ್ನು ಎದುರಿಸುತ್ತಿದೆ. ಈ ಕಾರಣದಿಂದ ಕೂಡಲೇ ತುರ್ತು ಅಧಿವೇಶನ ಕರೆದು ಲೋಕಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲಿರುವ ಕಾಂಗ್ರೆಸ್ ಅಂಗಪಕ್ಷಗಳು ಹೇಳಿದ ಹಾಗೆ ಕುಣಿಯತೊಡಗಿದೆ ಎಂದು ಕಿಡಿಕಾರಿದರು.
(ಏಜೆನ್ಸೀಸ್)