ಬುಷ್ ಗಿಂತ ಆಡ್ವಾಣಿ ಅಪಾಯಕಾರಿ: ಅಮರ್ ಸಿಂಗ್
ನವದೆಹಲಿ, ಜು. 5 : ಭಾರತೀಯ ಜನತಾ ಪಕ್ಷ ಅಮೇರಿಕದ ಅಧ್ಯಕ್ಷ ಜಾರ್ಜ್ ಬುಷ್ ಗಿಂತ ಅಪಾಯಕಾರಿ ಎಂದು ಸಮಾಜವಾದಿ ಪಕ್ಷದ ಮುಖಂಡ ಅಮರಸಿಂಗ್ ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ಜಾತೀಯತೆ ಪಕ್ಷಗಳು ಅಧಿಕಾರಕ್ಕೆ ಬರುವುದನ್ನು ಸಮಾಜವಾದಿ ಪಕ್ಷ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತೀಯತೆಯಿಂದ ದೇಶ ಇಂದು ಅಪಾಯಕಾರಿ ಹಂತ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅಮೇರಿಕಾ ಅಧ್ಯಕ್ಷ ಜಾರ್ಜ್ ಬುಷ್ ಅವರ ಆಡಳಿತ ಇನ್ನು ಕೆಲವೆ ತಿಂಗಳಗಳಲ್ಲಿ ಮುಗಿಯಲಿದೆ ಎಂದ ಅವರು, ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಬುಷ್ ಗಿಂತ ಅಪಾಯಕಾರಿ ವ್ಯಕ್ತಿ ಎಂದು ನೇರ ಆರೋಪ ಮಾಡಿದರು. ಅಡ್ವಾಣಿ ಅವರಿಗೆ ದೇಶದ ಹಿತಕ್ಕಿಂತ ಪಕ್ಷದ ತತ್ವ ಸಿದ್ಧಾಂತವೇ ಮೇಲು. ಹೀಗಾಗಿ ಇಂತಹ ದೃಷ್ಟಿಕೋನವಿರುವ ವ್ಯಕ್ತಿಗಳಿಂದ ದೇಶ ಹಿತ ಕಾಯಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಯುಪಿಎ ಸರ್ಕಾರಕ್ಕೆ ಬೆಂಬಲ ನೀಡುವುದನ್ನು ಸಮರ್ಥಿಸಿಕೊಂಡ ಅಮರ್ ಸಿಂಗ್, ಪರಮಾಣು ಒಪ್ಪಂದ ಮುಸ್ಲಿಂ ವಿರೋಧಿ ಎನ್ನುವುದನ್ನು ಸ್ಪಷ್ಟವಾಗಿ ತಳ್ಳಿಹಾಕಿದರು. ಅಣುಒಪ್ಪಂದ ಮುಸ್ಲಿಂ ವಿರೋಧಿ ಎಂಬ ಆರೋಪವನ್ನು ನಿವೃತ್ತ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ತಳ್ಳಿ ಹಾಕಿದ್ದಾರೆ. ಅವರು ದೇಶದ ಹಿತ ಕಾಪಾಡುವ ಒಪ್ಪಂದ ಇದಾಗಿದ್ದು, ಸಲ್ಲದ ಆರೋಪಗಳಿಗೆ ಮಣಿಯಬಾರದು ಎಂದು ಕಿವಿ ಮಾತು ಹೇಳಿದ್ದಾರೆ. ಆದ್ದರಿಂದ ಸಮಾಜವಾದಿ ಪಕ್ಷದಲ್ಲಿ ಯಾವುದೇ ಬದಲಾವಣೆಯಿಲ್ಲ. ಅಣುಬಂಧಕ್ಕೆ ಪಕ್ಷದ ಸಂಪೂರ್ಣ ಸಹಮತವಿದೆ ಎಂದು ಅಮರ್ ಸಿಂಗ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)