ಬಾಲಕಿಯ ಜೀವಕ್ಕೇ ಮುಳುವಾದ ರಿಯಾಲಿಟಿ ಶೋ
ಬೆಂಗಳೂರು, ಜೂ. 28 : ಗೆದ್ದೇ ಗೆಲ್ಲಬೇಕೆಂಬ ವಿಪರೀತ ಒತ್ತಡಕ್ಕೆ ಪುಟಾಣಿ ಮಕ್ಕಳನ್ನು ತಳ್ಳುವ ಹಾಡು ಅಥವಾ ನೃತ್ಯ ಸ್ಪರ್ಧೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆ? ಅಥವಾ ಎಂಥದೇ ಒತ್ತಡಗಳನ್ನು ತಡೆದುಕೊಳ್ಳುವಂತೆ ಮುಗ್ಧ ಮಕ್ಕಳನ್ನು ತಯಾರು ಮಾಡಬೇಕೆ? ಅಥವಾ ಮಕ್ಕಳು ಸೇರಿದಂತೆ ಪಾಲಕರನ್ನೂ ತೀವ್ರ ಸಂಸತದ ಮತ್ತು ನಿರಾಸೆಯ ಮಡುವಿಗೆ ತಳ್ಳುವ ಈ ಸ್ಪರ್ಧೆಗಳ ರೂಪುರೇಷೆಯನ್ನು ಅಮೂಲಾಗ್ರವಾಗಿ ಬದಲಾಯಿಸಬೇಕೆ?
ಇಂಥ ಒಂದು ಜಿಜ್ಞಾಸೆಗೆ ಒರೆಹಚ್ಚುವ ವಿದ್ರಾವಕ ಘಟನೆಯೊಂದು ದೂರದ ಕೊಲ್ಕತಾದಲ್ಲಿ ನಡೆದಿದ್ದು, ಪುಟ್ಟ ಮಗುವೊಂದು ಸ್ಪರ್ಧೆಯಲ್ಲಿ ಸೋತಿದ್ದಕ್ಕಾಗಿ ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿ ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ದಾಖಲಾಗಿದ್ದು, ಜೀವಚ್ಛವದಂತೆ ಆಗಿದ್ದಾಳೆ.
ಘಟನೆ ವಿವರ : ಕೊಲ್ಕತ್ತಾದಲ್ಲಿ ಕಿರುತೆರೆಯೊಂದರಲ್ಲಿ ನಡೆದ ರಿಯಾಲಿಟಿ ಶೋದಲ್ಲಿ ಅನುಭವಿಸಿದ ಸೋಲನ್ನು ಭರಿಸಲಾರದೆ ಹದಿನಾರರ ಬಾಲಕಿ ಸಿಂಜಿನಿ ಗುಪ್ತಾ ಮಾನಸಿಕ ಆಘಾತಕ್ಕೆ ಒಳಗಾಗಿ ಶೋ ನಡೆಯುತ್ತಿದ್ದಾಗಲೇ ಕುಸಿದು ಬಿದ್ದಳು. ಆಕೆಯನ್ನು ತಕ್ಷಣ ಕೊಲ್ಕತ್ತಾ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಥಮ ಚಿಕಿತ್ಸೆ ನೀಡಿರುವ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಸಿಂಜಿನಿಯನ್ನು ಬೆಂಗಳೂರಿಗೆ ಕರೆತಂದಿದ್ದಾರೆ.
ಸಿಂಜಿನಿ ಕೈಕಾಲುಗಳು ಸ್ವಾಧೀನ ಕಳೆದುಕೊಂಡಿದ್ದಾಳೆ. ಮಾತುಗಳು ಕೂಡ ನಿಂತು ಹೋಗಿವೆ. ನುರಿತ ತಜ್ಞರು ವೈದ್ಯರ ಚಿಕಿತ್ಸೆ ನೀಡುತ್ತಿದ್ದಾರೆ. ಸಿಂಜಿನಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸದ್ಯಕ್ಕೆ ಆಕೆಯನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ.
ಕಿರುತೆರೆಯಲ್ಲಿ ನಡೆಯುತ್ತಿದ್ದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಿಂಜಿನಿ ಫಲಿತಾಂಶ ಕೇಳಿ ಆಘಾತಕ್ಕೆ ಒಳಗಾಗಿದ್ದಾಳೆ. ಹಾಗೂ ತೀರ್ಪುಗಾರರು ಫಲಿತಾಂಶಕ್ಕೂ ಮುನ್ನ ಆಕೆಗೆ ಅವಮಾನ ಮಾಡಿದರು. ಇದರಿಂದ ನೊಂದುಕೊಂಡು ಮಾನಸಿಕ ಅಸ್ತವ್ಯಸ್ತವಾಗಿದ್ದಾಳೆ ಎಂದು ಸಿಂಜಿನಿ ತಂದೆ ದಿಲೀಪ ಗುಪ್ತಾ ಆರೋಪಿಸಿದ್ದಾರೆ. ಸಿಂಜಿನಿ ಪ್ರತಿಭಾವಂತ ಕಲಾವಿದೆಯಾಗಿದ್ದೂ ಇದಕ್ಕೂ ಮುನ್ನ ಟೆಲಿಫಿಲ್ಮ್ ಮತ್ತು ಬಂಗಾಲಿ ಧಾರಾವಾಹಿಯಲ್ಲಿ ನಟಿಸಿದ್ದಾಳೆ.
ಕರ್ನಾಟಕದಲ್ಲಿಯೂ ಪ್ರತಿ ಟಿವಿ ಚಾನಲ್ಗಳಲ್ಲಿ ಎರಡೆರಡರಂತೆ ಇಂಥ ರಿಯಾಲಿಟಿ ಶೋಗಳು ನಡೆಯುತ್ತಿವೆ. ಕೆಲವು ಉತ್ತಮ ಪ್ರತಿಕ್ರಿಯೆ ಗಳಿಸಿದ್ದರೂ, ಕೆಲವಲ್ಲಿ ವಿಪರೀತ ಗ್ಲಾಮರ್ಗೆ ಒತ್ತು ನೀಡುತ್ತಾರೆ, ಗುಣಮಟ್ಟಕ್ಕೆ ಕಡಿಮೆ ಪ್ರಾಶಸ್ತ್ಯ ನೀಡುತ್ತಾರೆ ಎಂಬ ಮಾತುಗಳೂ ಕೇಳಿ ಬಂದಿವೆ. ಸೋತಿದ್ದನ್ನು ತಡೆಯಲಾರದೆ ಪಾಲಕರ ಸಹಿತ ಅನೇಕ ಮಕ್ಕಳು ಅತ್ತಿದ್ದೂ ಘಟಿಸಿವೆ. ಮಕ್ಕಳನ್ನು ಶೋ ಮುಗಿಯುತ್ತಿದ್ದಂತೆ ಸೆಲೆಬ್ರಿಟಿ ಮಟ್ಟಕ್ಕೆ ಏರಿಸುತ್ತಿವೆ. ಕೊಲ್ಕೊತಾದಲ್ಲಿ ನಡೆದ ಈ ಘಟನೆ ನಮ್ಮ ರಿಯಾಲಿಟಿ ಶೋಗಳಿಗೂ ಬಾರಿಸಿದ ಎಚ್ಚರಿಕೆ ಗಂಟೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಸಂಗೀತದ
ನೆಪದಲ್ಲಿ
ಜಿದ್ದಿಗೆ
ಬಿದ್ದ
ಟಿವಿ
ಮಾಧ್ಯಮ