ಬಿಜೆಪಿಯನ್ನು ಪೇಚಿಗೆ ಸಿಕ್ಕಿಸಲು ಪ್ರತಿಪಕ್ಷ ಸಜ್ಜು
ಬೆಂಗಳೂರು,ಜೂ. 23 : ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಡಳಿತರೂಢ ಬಿಜೆಪಿ ಪಕ್ಷದ ಮೊದಲ ಅಧಿವೇಶನ ಸೋಮವಾರ ಬೆಳಗ್ಗೆ ಆರಂಭವಾಗಿದೆ. ಅಧಿಕಾರ ವಹಿಸಿಕೊಂಡು ಕೇವಲ 24 ದಿನ ಕಳೆದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರದ ಮೇಲೆ ವಾಗ್ಧಾಳಿ ನಡೆಸಲು ಪ್ರತಿಪಕ್ಷಗಳು ಶಸ್ತ್ರಾಸ್ತ್ರಗಳ ಸಮೇತ ಸಜ್ಜಾಗಿವೆ.
ಮುಖ್ಯವಾಗಿ ರಾಜ್ಯದಲ್ಲಿ ಉಂಟಾಗಿರುವ ರಸಗೊಬ್ಬರ ಆಭಾವ, ಹಾವೇರಿ ಗೋಲಿಬಾರ್, ರೈತರ ಆತ್ಮಹತ್ಯೆ ಘಟನೆ ಮತ್ತು ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯಾ ಅವರ ಪ್ರಕರಣದ ಸುತ್ತ ಸುತ್ತಿಕೊಂಡಿರುವ ನಿಗೂಢತೆ ಈ ಎಲ್ಲ ವಿಷಯಗಳ ಮೇಲೆ ಗಂಭೀರ ಚರ್ಚೆ ನಡೆಯಲಿದೆ.
ಆರು ಜನ ಪಕ್ಷೇತರ ಶಾಸಕರ ಬೆಂಬಲದ ಮೂಲಕ ಅಧಿಕಾರ ಪಡೆದುಕೊಂಡಿರುವ ಬಿಜೆಪಿಗೆ ಈ ಅಧಿವೇಶನ ಅಗ್ನಿ ಪರೀಕ್ಷೆ ಎಂದರೆ ತಪ್ಪಾಗಲಾರದು. ಮೊದಲ ಅಧಿವೇಶನಕ್ಕೆ ಸಮಸ್ಯೆಗಳ ಸರಮಾಲೆ ಎದುರಿಸಬೇಕಿರುವುದು ಆಡಳಿತ ಪಕ್ಷದ ಚಿಂತೆಗೆ ಕಾರಣವಾಗಿದೆ.
ನಾಲ್ಕು ದಿನಗಳ ಕಾಲ ನಡೆಯುವ ಈ ಅಧಿವೇಶನ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ಮತ್ತು ಹಾಗೂ ಬಿಜೆಪಿ ಆಡಳಿತ ವೈಖರಿ ಪ್ರಮುಖ ಚರ್ಚೆಯ ವಿಷಯಗಳಾಗಿವೆ. ರೈತರ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಸರ್ಕಾರದ ಕ್ರಮದ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ತರಾಟೆ ತಗೆದುಕೊಳ್ಳುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಶಾಸಕಾಂಗ ಸಭೆ : ಆಡಳಿತರೂಢ ಬಿಜೆಪಿ ಪಕ್ಷದ ಪ್ರಥಮ ಅಧಿವೇಶನ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ವೀರಣ್ಣ ಮತ್ತಿಕಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಹಾಗೂ ಇತರ ಹಿರಿಯ ಶಾಸಕರ ಉಪಸ್ಥಿತಿಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು.
(ದಟ್ಸ್ ಕನ್ನಡ ವಾರ್ತೆ)