ಜು.7ರಿಂದ ಸಂಚಾರಿ ಹೈಕೋರ್ಟ್ ಪೀಠ ಕಾರ್ಯಾರಂಭ
ಬೆಂಗಳೂರು, ಜೂ.23 : ಉತ್ತರ ಕರ್ನಾಟಕ ಜನರ ಬಹುದಿನದ ಕನಸು ನನಸಾಗುವ ಸಂಭ್ರಮದ ಕಾಲ ಕೂಡಿ ಬಂದಿದೆ. ಅನೇಕ ಹೋರಾಟ,ಚಳುವಳಿ, ಘೇರಾವ್, ಉಪವಾಸ ಸತ್ಯಾಗ್ರಹ ಸೇರಿದಂತೆ ನೂರೆಂಟು ವಿಘ್ನಗಳ ದಾಟಿ ಕೊನೆಗೂ ಹುಬ್ಬಳ್ಳಿ ಮತ್ತು ಗುಲ್ಬರ್ಗಾದಲ್ಲಿ ಜು.7 ರಿಂದ ಸಂಚಾರಿ ಹೈಕೋರ್ಟ್ ಪೀಠದಲ್ಲಿ ಅಧಿಕೃತವಾಗಿ ಕಾರ್ಯಕಲಾಪಗಳು ನಡೆಯಲಿವೆ.
ಬೆಂಗಳೂರಿನಲ್ಲಿರುವ ಹೈಕೋರ್ಟ್ ಕೇಂದ್ರ ಸ್ಥಾನವಾಗಿದ್ದು, ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ಸಂಚಾರಿ ಪೀಠ ಸ್ಪಾಪನೆ ಮಾಡಲಾಗಿದೆ.ಈ ಎರಡು ನಗರಗಳಲ್ಲಿ ನಿರ್ಮಿಸಲಾಗಿರುವ ಸಂಚಾರಿ ಪೀಠಗಳು ಬೆಂಗಳೂರು ಹೈಕೋರ್ಟ್ ನ ಅಂಗ ಪೀಠಗಳಾಗಿವೆ. ಮುಂದಿನ ತಿಂಗಳ ಜು.7 ರಂದು ಎರಡೂ ನಗರಗಳಲ್ಲಿ ತನ್ನ ಕಾರ್ಯಕಲಾಪಗಳನ್ನು ಆರಂಭಿಸಲಿವೆ.
ಈ ಕುರಿತು ಈಗಾಗಲೇ ಸಾಕಷ್ಟು ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗಿದ್ದು, ಈ ನಗರಗಳ ವ್ಯಾಪ್ತಿಗೆ ಬರುವ ಸುಮಾರು 25 ಸಾವಿರ ಪ್ರಕರಣಗಳನ್ನು ಆಯಾ ಸ್ಥಳಕ್ಕೆ ವರ್ಗಾಯಿಸಲಾಗಿದೆ. ಜತೆಗೆ ಧಾರವಾಡ ಮತ್ತು ಗುಲ್ಬರ್ಗಾ ನಗರ ಸಂಚಾರಿ ಹೈಕೋರ್ಟ್ ಪೀಠಕ್ಕೆ ತಲಾ ಐದು ಮಂದಿ ನ್ಯಾಯಾಧೀಶರ ನೇಮಕ ಮಾಡಲಾಗಿದೆ.
ಧಾರವಾಡ ವಿಭಾಗೀಯ ಸಂಚಾರಿ ಪೀಠಕ್ಕೆ ನ್ಯಾಯಮೂರ್ತಿ ಎಸ್.ಆರ್.ಬನ್ನೂರ್ ಮಠ್ ಅಧ್ಯಕ್ಷತೆಯಲ್ಲಿ ಅಶೋಕ್ ಬಿ.ಹಂಚಿಗೇರಿ,ಎಸ್.ಅಬ್ದುಲ್ ನಜೀರ್, ಎ.ಎನ್.ವೇಣುಗೋಪಾಲಗೌಡ, ಎ.ಎಸ್.ಪಾಚ್ಚಪೂರೆ ಹಾಗೂ ಗುಲ್ಗರ್ಗಾ ವಿಭಾಗೀಯ ಪೀಠಕ್ಕೆ ವಿ.ಗೋಪಾಲಗೌಡ ನೇತೃತ್ವದಲ್ಲಿ ಅರಳಿ ನಾಗರಾಜ್,ಎನ್.ಕೆ.ಪಾಟೀಲ್, ಬಿ.ಎಸ್.ಪಾಟೀಲ್ ಮತ್ತು ಎನ್.ಆನಂದ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗುಲ್ಬರ್ಗ, ಧಾರವಾಡ ಮತ್ತು ಬೆಂಗಳೂರು ಕೋರ್ಟ್ ಗೆ ಸೇರಿದ ಪ್ರಕರಣಗಳನ್ನು ಆಯಾ ಸ್ಥಳಗಳಲ್ಲಿ ಇತ್ಯರ್ಥಗೊಳಿಸಲಾಗುತ್ತದ.
(ದಟ್ಸ್ ಕನ್ನಡ ವಾರ್ತೆ)