ಎಸಿ ಬಿಸಿ ಎಬ್ಬಿಸಿದ್ದಕ್ಕೆ ಬಿಸಿಸಿಐನಿಂದ ಶ್ರೀಶಾಂತ್ಗೆ ನೊಟೀಸ್
ನವದೆಹಲಿ, ಜೂ. 18 : ಬೆಂಗಳೂರಿನ ಗ್ರಾಂಡ್ ಅಶೋಕ ಹೊಟೇಲಿನಲ್ಲಿ ಏರ್ಕಂಡಿಷನರ್ಗೆ ಸಂಬಂಧಿಸಿದಂತೆ ಬಿಸಿಬಿಸಿ ವಾಗ್ವಾದಕ್ಕೆ ಕಾರಣರಾಗಿದ್ದ ಭಾರತೀಯ ಕ್ರಿಕೆಟ್ನ 'ಬ್ಯಾಡ್ ಬಾಯ್' ಶಾಂತಕುಮಾರನ್ ಶ್ರೀಶಾಂತ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 'ತಣ್ಣನೆಯ' ನೊಟೀಸ್ ನೀಡಿದೆ.
ಕಳೆದ ಭಾನುವಾರ ಅಶೋಕ ಹೊಟೇಲ್ ಸಿಬ್ಬಂದಿಯೊಡನೆ ತಿಕ್ಕಾಟಕ್ಕಿಳಿದು ರಂಪಾಟ ನಡೆಸಿದ್ದಕ್ಕೆ ವಿವರಣೆ ನೀಡಬೇಕೆಂದು ವೇಗದ ಬೌಲರ್ ಶ್ರೀಶಾಂತ್ರನ್ನು ಬಿಸಿಸಿಐ ಕೇಳಿಕೊಂಡಿದೆ. ಅಶೋಕ ಹೊಟೇಲ್ ಆಡಳಿತಕ್ಕೂ ಈ ಘಟನೆ ಕುರಿತಂತೆ ವಿವರ ನೀಡಬೇಕೆಂದು ಬಿಸಿಸಿಐ ಪತ್ರ ಬರೆದಿದೆ.
ಅಶೋಕ ಹೊಟೇಲ್ನಲ್ಲಿ ಉಳಿದುಕೊಂಡಿದ್ದ ಶ್ರೀಶಾಂತ್ರನ್ನು ಸದ್ದು ಮಾಡುತ್ತಿದ್ದ ಎಸಿ ಶ್ರೀಶಾಂತ್ರನ್ನು ಕೆರಳಿಸಿತ್ತು. ಸಿಬ್ಬಂದಿಯನ್ನು ಸಂಪರ್ಕಿಸಿದ ಶ್ರೀಶಾಂತ್ ಬೇರೆ ಕೋಣೆ ನೀಡಬೇಕೆಂದು ಕೇಳಿಕೊಂಡಿದ್ದರು. ಯಾವುದೇ ರೂಮು ಖಾಲಿ ಇಲ್ಲದ್ದರಿಂದ ಕೆಲಕಾಲ ಕಾಯಬೇಕೆಂದು ಸಿಬ್ಬಂದಿ ಕೇಳಿಕೊಂಡಿದ್ದರು. ಇಷ್ಟಕ್ಕೇ ಅಶಾಂತರಾದ ಶ್ರೀಶಾಂತ್ ಸಿಟ್ಟಿಗೆದ್ದು ಬೇರೆ ಹೊಟೇಲಿಗೆ ಹೋಗುವುದಾಗಿ ಬೆದರಿಕೆಯೊಡ್ಡಿದರು. ನಂತರ ಹೊಟೇಲ್ ಸಿಬ್ಬಂದಿಯೇ ಅವರನ್ನು ಮನವೊಲಿಸಿ ಶಾಂತಪಡಿಸಿದ್ದರು.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಶಾಂತ್ ಏಷ್ಯಾ ಕಪ್ನಿಂದ ಹೊರಬಿದ್ದ ನಂತರ ದೈಹಿಕ ಆರೋಗ್ಯವನ್ನು ಮರಳಿ ಪಡೆಯಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಬೆಂಗಳೂರಿನಲ್ಲಿದ್ದರು. ಎಲ್ಲವೂ ಸುಖಕರವಾಗಿ ಮುಕ್ತಾಯವಾಯಿತಲ್ಲ ಎಂಬ ಹಂತದಲ್ಲಿ ಬಿಸಿಸಿಐ ಕೆರಳಿ ಕೆಂಡವಾಗಿದೆ. ಯಾವಾಗಲೂ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಶ್ರೀಶಾಂತ್ ಈ ಘಟನೆ ಬಗ್ಗೆ ವಿವರಣೆ ಕೊಡಬೇಕೆಂದು ನೊಟೀಸ್ ಜಾರಿಮಾಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೆಲ್ಲ ತಾಳ್ಮೆ ಕಳೆದುಕೊಂಡು ವಿಪರೀತವಾಗಿ ಪ್ರತಿಕ್ರಿಯಿಸುವ ಶ್ರೀಶಾಂತ್ಗೂ ವಿವಾದಗಳಿಗೂ ಅವಿನಾಭಾವ ಸಂಬಂಧ. ಆಸ್ಟ್ರೇಲಿಯಾ ಸರಣಿಯಲ್ಲಿಯೂ ಓವರ್ ಅಪೀಲ್ ಮಾಡಿದ್ದಕ್ಕೆ ರೆಫ್ರಿ ಕಂಗಣ್ಣಿಗೆ ಗುರಿಯಾಗಿದ್ದರು.
ಇತ್ತೀಚೆಗೆ ನಡೆದ ಐಪಿಎಲ್ ಟೂರ್ನಿಯಲ್ಲಿಯೂ ಪಂಜಾಬ್ ಪರ ಆಡುತ್ತಿದ್ದ ಶ್ರೀಶಾಂತ್ಗೆ ಮುಂಬೈ ಕ್ಯಾಪ್ಟನ್ ಆಗಿದ್ದ ಹರಭಜನ್ರಿಂದ ಕಪಾಳಮೋಕ್ಷವಾಗಿತ್ತು. ಆಗ ಎಲ್ಲರ ಸಹಾನುಭೂತಿಗೆ ಎಡೆಯಾಗಿ ನಡವಳಿಕೆ ಉತ್ತಮಪಡಿಸಿಕೊಂಡಿದ್ದ ಶ್ರೀಶಾಂತ್ ನಂತರದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
(ಏಜೆನ್ಸೀಸ್)