ಮತ್ತೊಂದು ಬಲಿ ತೆಗೆದುಕೊಂಡ ಗೊಬ್ಬರ ಗಲಾಟೆ
ದಾವಣಗೆರೆ, ಜೂ.18 : ರಸಗೊಬ್ಬರ ಸಿಗದೇ ನಿರಾಶನಾದ ಹಿರೇಬಿದನೂರು ಅಜ್ಜಪ್ಪ ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಯಡಿಯೂರಪ್ಪ ಸರ್ಕಾರವನ್ನು ಮತ್ತೆ ನಡುಗಿಸಿದೆ. ರಸಗೊಬ್ಬರ ಪೂರೈಸುವಂತೆ ಆಗ್ರಹಿಸಿ ಹರಿಹರದ ಮಲೇಬೆನ್ನೂರಿನ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಬುಧವಾರ ನಿರತರಾಗಿದ್ದರು.
ಹಾವೇರಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಸಿದ್ದಲಿಂಗಪ್ಪ ಚೂರಿ ಘಟನೆ ಬೆನ್ನಲ್ಲೇ ಗೊಬ್ಬರ ಗಲಾಟೆಗೆ ಮತ್ತೊಂದು ಜೀವ ಬಲಿಯಾಗಿದೆ. ರಸಗೊಬ್ಬರ ಸಿಗದೆ ಪ್ರತಿಭಟನೆಯಲ್ಲಿ ನಿರತನಾಗಿದ್ದ ಅಜ್ಜಪ್ಪ ಮನನೊಂದು ವಿಷ ಸೇವಿಸಿದ. ಕೂಡಲೆ ಅಜ್ಜಪ್ಪನನ್ನು ಚಿಕಿತ್ಸೆಗಾಗಿ ದಾವಣಗೆರೆಯ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಕರೆತರಲಾಯಿತು. ಅಜ್ಜಪ್ಪನ ಜೀವ ಉಳಿಸಲು ವೈದ್ಯರು ಸಾಕಷ್ಟು ಶ್ರಮಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಜ್ಜಪ್ಪ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ಮೃತ ಅಜ್ಜಪ್ಪ ಕೊಮಾರಹಳ್ಳಿ ನಿವಾಸಿ.
ರಸಗೊಬ್ಬರ ಪೂರೈಸದ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳನ್ನು ಪರಿಹರಿಸಬೇಕು. ರೈತರ ಸಾವಿಗೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ಇಷ್ಟೆಲ್ಲಾ ರೈತರು ಸಾವನ್ನಪ್ಪುತ್ತಿದ್ದರೂ ಸರ್ಕಾರದ ನಿರ್ಲಕ್ಷ್ಯದಿಂದಿದೆ. ಸರ್ಕಾರಕ್ಕೆ ವಿವೇಕ ಇಲ್ಲ ಎನ್ನುವುದು ಇದರಿಂದ ಸಾಬೀತಾಗಿದೆ ಎಂದು ಘಟನೆಗೆ ಸಂಬಂಧಿಸಿದಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆ ರೈತರು ಗುರುವಾರ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಪತಿಕ್ರಿಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಮೃತ ರೈತನ ಕುಟುಂಬಕ್ಕೆ 1 ಲಕ್ಷ ರು ಪರಿಹಾರ ಸೂಚಿಸಿ, ರೈತರು ತಾಳ್ಮೆಯಿಂದರಬೇಕು ಎಂದು ಮನವಿಮಾಡಿದ್ದಾರೆ.
(ದಟ್ಸ್ಕನ್ನಡ ವಾರ್ತೆ)