ಬೆಂಗಳೂರಿನ ವಿಜ್ಞಾನಿ ಕುಟುಂಬದ ಆತ್ಮಹತ್ಯೆ ಯತ್ನ
ಮಂಗಳೂರು, ಜೂ. 13 : ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜ್ಞಾನಿಯ ಇಡೀ ಕುಟುಂಬ ಇಲ್ಲಿಯ ಹೊಟೇಲೊಂದರಲ್ಲಿ ವಿಷ ಸೇವಿಸಿ ಶುಕ್ರವಾರ ರಾತ್ರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ವಿಜ್ಞಾನಿ ವಿಜಯ್ಕುಮಾರ್ ಸಿಂಗ್ ಅಸುನೀಗಿದ್ದಾರೆ.
ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯಲ್ಲಿ ನೆಲೆಸಿರುವ ರಾಜಸ್ತಾನ ಮೂಲದ ವಿಜಯ್ಕುಮಾರ್(46) ಪತ್ನಿ ಸವಿತಾ(43), ಮಗಳು ಶ್ರುತಿ(16) ಮತ್ತು ಮಗ ಶಿವಾಂಶು(14) ಸಮೇತ ಇಲ್ಲಿಗೆ ಶುಕ್ರವಾರ ಆಗಮಿಸಿದ್ದರು. ಸುತ್ತಲಿನ ಕೆಲ ಕ್ಷೇತ್ರಗಳನ್ನು ಸಂದರ್ಶಿಸಿದ ಅವರು ರಾತ್ರಿ ಹೊಟೇಲಿನಲ್ಲಿ ಆತ್ಮಹತ್ಯೆ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಅವರ ಚೀರಾಟವನ್ನು ಕೇಳಿ ಹೊಟೇಲಿನ ಸಿಬ್ಬಂದಿ ವಿಜ್ಞಾನಿ ಕುಟುಂಬವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ವಿಜಯ್ಕುಮಾರ್ ಹಾದಿಯಲ್ಲೇ ಮರಣ ಹೊಂದಿದ್ದಾರೆ. ಸವಿತಾ ಅವರ ಸ್ಥಿತಿ ಗಂಭೀರವಾಗಿದೆ. ಮಕ್ಕಳಿಬ್ಬರೂ ಹೆಚ್ಚು ಕೀಟನಾಶಕ ಸೇವಿಸದ ಕಾರಣ ಪ್ರಣಾಪಾಯದಿಂದ ಪಾರಾಗಿದ್ದಾರೆ. ಉಳಿದವರು ವಿಷ ಸೇವಿಸುತ್ತಿದ್ದಾಗ ತಾನು ವಿಷ ಸೇವಿಸಿದಂತೆ ನಾಟಕವಾಡಿದೆ ಎಂದು ಶಿವಾಂಶು ಪೊಲೀಸರಿಗೆ ತಿಳಿಸಿದ್ದಾನೆ.
(ಯುಎನ್ಐ)