ತೈಲ ಬೆಲೆ ಏರಿಕೆಗೆ ಕೇಂದ್ರ ಸಂಪುಟ ಒಪ್ಪಿಗೆ
ನವದೆಹಲಿ, ಜೂ.4 : ಕೊನೆಗೂ ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ತೈಲ ದರ ಏರಿಕೆಗೆ ಕುರಿತಂತೆ ಸಚಿವ ಸಂಪುಟ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಬೆಲೆ ಏರಿಕೆಗೆ ಒಪ್ಪಿಗೆ ಸೂಚಿಸಿದೆ. ಪೆಟ್ರೋಲ್ 5 ರು ಮತ್ತು ಡೀಸೆಲ್ 3ರು ಹಾಗೂ ಎಲ್ ಪಿಜಿ ಸಿಲೆಂಡರ್ ಬೆಲೆಯನ್ನು 50 ರುಪಾಯಿಗಳಿಗೆ ಹೆಚ್ಚಿಸಲಾಗಿದೆ.ಸೀಮೆಎಣ್ಣೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.ನೂತನ ಬೆಲೆ ದರಗಳು ಜೂ. 4 ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನಲೆಯಲ್ಲಿ ಜನಸಾಮಾನ್ಯರಿಗೆ ಹೊರೆಯಾಗದಂತೆ ಬೆಲೆ ಏರಿಕೆಯನ್ನು ಮಾಡಲಾಗಿದೆ. ನವದೆಹಲಿಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿದೇಶಾಂಗ ಖಾತೆ ಸಚಿವ ಪ್ರಣವ್ ಮುಖರ್ಜಿ ತಿಳಿಸಿದ್ದಾರೆ.
ಕಳೆದ ವಾರವಷ್ಟೆ ಯುಪಿಎ ಚೇರ್ ಮನ್ ಸೋನಿಯಾ ಗಾಂಧಿ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಹಿರಿಯ ಸಚಿವರ ಸಭೆ ಕರೆದು ಈ ಕುರಿತು ಸಮಗ್ರ ಚರ್ಚೆ ನಡೆಸಿದ್ದರು. ಆದರೆ ಅಂದು ದರ ನಿಗದಿಗೆ ಸಂಬಂಧಿಸಿದಂತೆ ಯಾವುದೇ ನಿರ್ಣಯ ಕೈಗೊಳ್ಳಲು ವಿಫಲರಾಗಿದ್ದರು. ತೈಲ ಕಂಪನಿಗಳ ಒತ್ತಡ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಬೆಲೆ ಏರಿಕೆ ಎದುರಿಸುವ ಸಲುವಾಗಿ ತೈಲ ಬೆಲೆಗಳ ಏರಿಕೆ ಅನಿವಾರ್ಯವಾಗಿತ್ತು ಎಂದು ಅವರು ಹೇಳಿದರು,
ಪೆಟ್ರೋಲಿಯಂ ಸಚಿವ ಮುರಳಿ ದೆವೋರಾ ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಪೆಟ್ರೋಲ್ ಗೆ 10 ರು ಮತ್ತು ಡೀಸೆಲ್ ಗೆ 5 ರು.ಗಳನ್ನು ಏರಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಬಹುದಿನಗಳಿಂದ ನೆನೆಗುದಿಗೆ ಬಿದ್ದದ್ದ ದರ ಏರಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಎಡಪಕ್ಷಗಳ ವಿರೋಧ: ಸಂಪುಟ ಸಚಿವರ ಒಪ್ಪಿಗೆ ಪಡೆದು, ಬೆಲೆ ಏರಿಕೆ ಮಾಡುತ್ತಿರುವುದಾಗಿ ಯುಪಿಎ ಸರ್ಕಾರ ಹೇಳಿಕೊಂಡರೂ, ಎಡಪಕ್ಷಗಳು ಪೂರ್ಣ ಸಮ್ಮತಿ ದೊರಕದ ಕಾರಣ, ಪ್ರತಿಭಟನೆ ಎದುರಿಸಬೇಕಾಗಿದೆ. ಜೂ. 5 ರಿಂದ 11 ರವರೆಗೆ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಡಪಕ್ಷಗಳು ಧಮಕಿ ಹಾಕಿವೆ. ತೈಲ ಬೆಲೆ ಏರಿಕೆ ಹೆಚ್ಚಳ ಸುದ್ದಿ ತಿಳಿದ ಕೂಡಲೇ ಬೆಂಗಳೂರಿನ ಹಲವೆಡೆ ಪೆಟ್ರೋಲ್ ಬಂಕ್ ಗಳಲ್ಲಿ "ನೋ ಸ್ಟಾಕ್ " ಫಲಕ ಹಾಕಿದ್ದಾರೆ. ಮಾಮೂಲಿ ಪೆಟ್ರೋಲ್ ಬದಲು ಬ್ರಾಂಡೆಡ್ ಪೆಟ್ರೋಲ್ ಮಾರಾಟ ಮಾತ್ರ ಎಂದು ಹೇಳುತ್ತಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರು ಇಂದು ಸಂಜೆ ರಾಷ್ಟದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ತೈಲಬೆಲೆ ಏರಿಕೆಗೆ ಕಾರಣವನ್ನು ತಿಳಿಸುವ ಸಾಧ್ಯತೆಯಿದೆ.
(ದಟ್ಸ್ ಕನ್ನಡ ವಾರ್ತೆ)