ಜಂಟಿ ಸಭೆಯನ್ನುದ್ದೇಶಿಸಿ ಭಾಷಣಕ್ಕೆ ರಾಜ್ಯಪಾಲರ ಒಪ್ಪಿಗೆ
ಬೆಂಗಳೂರು, ಜೂ.3 : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾತುಕತೆ ಪಲಶೃತಿ ನೀಡಿದ್ದು, ಜಂಟಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ರಾಮೇಶ್ವರ ಠಾಕೂರ್ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಆರಂಭದಲ್ಲಿ ಶುರುವಾಗಿದ್ದ ವಿಘ್ನ ನಿರಾಂತಕವಾಗಿ ಕೊನೆಗೊಂಡಿದೆ.
ಮಂಗಳವಾರ ಬೆಳಗ್ಗೆ ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿ ಜಂಟಿ ಸಭೆಯನ್ನುದ್ದೇಶಿಸಿ ಭಾಷಣ ಮಾಡುವಂತೆ ಆಹ್ವಾನಿಸಿದರು. ಕೆಲಕಾಲ ಗಂಭೀರ ಚರ್ಚೆ ನಡೆಸಿದ ನಂತರ ಜೂ 6 ರಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಜಂಟಿ ಸಭೆ ಉದ್ದೇಶಿಸಿ ಭಾಷಣ ಮಾಡಲು ಒಪ್ಪಿಗೆ ಸೂಚಿಸಿದರೆನ್ನಲಾಗಿದೆ. ಅಧಿವೇಶನದ ನಂತರ ವಿಶ್ವಾಸ ಮತಯಾಚನೆ ನಡೆಸಲಾಗುವುದು. ಅಂದೇ ನೂತನ ಶಾಸಕರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ಜೂ 4, 5 ಮತ್ತು 6 ರಂದು ಅಧಿವೇಶನ ನಡೆಯಲಿದೆ. ಬಿಜೆಪಿಯ 110 ಜನ ಶಾಸಕರು ಮತ್ತು ಆರು ಜನ ಪಕ್ಷೇತರ ಶಾಸಕರು ಈಗಾಗಲೇ ರಾಜ್ಯಪಾಲರಿಗೆ ಬೆಂಬಲ ಪತ್ರವನ್ನು ನೀಡಿದ್ದಾರೆ. ಆದರೂ ಕೂಡಾ ರಾಜ್ಯಪಾಲ ರಾಮೇಶ್ವರ ಠಾಕೂರ್, ಮೊದಲು ತಮಗಿರುವ ಬಹುಮತವನ್ನು ಸಾಬೀತುಪಡಿಸಿ, ನಂತರ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವೆ ಎಂದು ಘರ್ಜಿಸಿದ್ದರು. ಇದು ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುಪ್ಪವಾಗಿತ್ತು. ಇದರಿಂದ ಕುಪಿತರಾದ ಬಿಜೆಪಿ ನಾಯಕರಾದ ಕೆ.ಎಸ್.ಈಶ್ವರಪ್ಪ, ಪ್ರಮೀಳಾ ನೇಸರ್ಗಿ ರಾಜ್ಯಪಾಲರನ್ನು ಕಾಂಗ್ರೆಸ್ ಏಜೆಂಟ್ ಎಂದು ದೂರಿದ್ದರು. ಪ್ರಜಾಪ್ರಭುತ್ವಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪ ಮಾಡಿದ್ದರು. ಈ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮೌನವಹಿಸಿದ್ದರು.
ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಸಂಸತ್ತಿನಲ್ಲಿ ವಿಶ್ವಾಸಮತಯಾಚನೆ ಪೂರ್ವದಲ್ಲಿ ರಾಷ್ಟ್ರಪತಿಯವರು ಜಂಟಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ್ದರು. ತಜ್ಞರ ಸಲಹೆ ಪ್ರಕಾರ ಸಂವಿಧಾನದ 174 ಕಲಂ 1ರ ಅನ್ವಯ ಇದು ಸಾಧ್ಯವಿದೆ ಎಂದು ಬಿಜೆಪಿ ನಾಯಕರ ವಾದವಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications