ಮೊದಲು ಬಹುಮತ ನಂತರ ಭಾಷಣ : ಠಾಕೂರ್ ಠೀವಿ
ಬೆಂಗಳೂರು, ಮೇ 31 : ಜೂನ್ 4ರಿಂದ ಆರಂಭವಾಗುತ್ತಲಿರುವ ವಿಶೇಷ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವ ಮೊದಲು ಬಹುಮತ ಸಾಬೀತು ಪಡಿಸಬೇಕೆಂದು ತಾಕೀತು ಮಾಡಿರುವ ರಾಜ್ಯಪಾಲ ರಾಮೇಶ್ವರ ಠಾಕೂರ್ ನೂತನವಾಗಿ ರಚಿತವಾಗಿರುವ ಯಡಿಯೂರಪ್ಪ ಸರ್ಕಾರಕ್ಕೆ ಇರುಸುಮುರುಸು ಉಂಟುಮಾಡಿದೆ.
ಅಡ್ವೋಕೇಟ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡಿರುವ ಉದಯ್ ಹೊಳ್ಳ ನೇತೃತ್ವದಲ್ಲಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಶುಕ್ರವಾರ ರಾತ್ರಿ ಭೇಟಿ ಮಾಡಿದಾಗ, ಬಿಜೆಪಿ ಸರ್ಕಾರ ಸ್ವತಂತ್ರವಾಗಿ ಬಹುಮತ ಗಳಿಸಿಲ್ಲದಿರುವುದರಿಂದ ಅಧಿವೇಶನ ಉದ್ದೇಶಿಸಿ ಮಾತನಾಡುವುದಿಲ್ಲ, ಮೊದಲು ಬಹುಮತ ಸಾಬೀತು ಪಡಿಸಲಿ ನಂತರ ಭಾಷಣ ಮಾಡುತ್ತೇನೆ ಎಂದು ಠಾಕೂರ್ ಹೇಳಿದ್ದಾರೆ.
ಇಂಥ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದು ಸಂಪ್ರದಾಯ. ಆದರೆ, ರಾಜ್ಯಪಾಲರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿರುವುದು ಉಚಿತವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಬಹುಮತ ಸಾಬೀತು ಪಡಿಸಲು ತಾವು ಸಿದ್ಧರಿರುವುದಾಗಿ ಠಾಕೂರ್ ಅವರ ಈ ಹೇಳಿಕೆಗೆ ಉತ್ತರಿಸಿದ್ದಾರೆ.
ಸಂವಿಧಾನದ ಪ್ರಕಾರ, ಯಾವುದೇ ಹೊಸ ಸರ್ಕಾರವನ್ನು ರಚಿಸಿದಾಗ ಮತ್ತು ಅಧಿವೇಶನ ನಡೆಸಿದಾಗ ಅಧಿವೇಶನದ ಪ್ರಥಮ ದಿನ ರಾಜ್ಯಪಾಲರು ಭಾಷಣ ಮಾಡಲೇಬೇಕು. ನಾವು ಈಗಾಗಲೇ, ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನ ನೀಡುವ ಮೊದಲು ಬಹುಮತ ಸಾಬೀತು ಪಡಿಸಿದ್ದೇವೆ. ಸಂವಿಧಾನದ 176ನೇ ಅನುಚ್ಛೇದದ ಪ್ರಕಾರವೂ ರಾಜ್ಯಪಾಲರ ಭಾಷಣ ಮೊದಲು ಬರಬೇಕು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಬಹುಮತ ಸಾಬೀತುಪಡಿಸಲು ಬಿಜೆಪಿ ನೇತೃತ್ವದ ಸರ್ಕಾರ ಜೂನ್ 4ರಿಂದ 6ರವರೆಗೆ ವಿಶೇಷ ಅಧಿವೇಶನವನ್ನು ಕರೆದಿದೆ. ಜೂನ್ 6ರಂದು ಬಹುಮತ ಸಾಬೀತುಪಡಿಸಲಿದೆ. ಹೊಳ್ಳ ಅವರು ಸಂವಿಧಾನದ ಅನುಚ್ಛೇದವನ್ನು ಉದ್ಧರಿಸಿ, ಮನವರಿಕೆ ಮಾಡಲು ಪ್ರಯತ್ನಿಸಿದರೂ ರಾಜ್ಯಪಾಲರು ತಮ್ಮ ನಿರ್ಧಾರಕ್ಕೆ ಕಟಿಬದ್ಧರಾಗಿದ್ದರೆಂದು ತಿಳಿದುಬಂದಿದೆ.
ಲಾರಿ ದುರಂತದ ಸ್ಥಳಕ್ಕೆ ಯಡ್ಡಿ ಭೇಟಿ : ಹಾಸನ ಜಿಲ್ಲೆಯ ಅರಕಲಗೂಡು ಬಳಿ ಘಟಿಸಿದ ಭೀಕರ ಲಾರಿ ದುರಂತದಲ್ಲಿ ಸತ್ತವರ ಕುಟುಂಬ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಯಡಿಯೂರಪ್ಪ ಇಂದು ಭೇಟಿ ಮಾಡಿ ಸಾಂತ್ವನ ಹೇಳಿದರು. ಸತ್ತವರಿಗೆ 1 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ ನೀಡಿದರು.
(ಯುಎನ್ಐ)