ಎಸ್ಎಸ್ಎಲ್ಸಿ ಪರೀಕ್ಷಾ ಪದ್ಧತಿ ಬದಲಾವಣೆ ಸಾಧ್ಯತೆ
ಬೆಂಗಳೂರು,ಮೇ 17: ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಫಲಿತಾಂಶ ಕುಸಿದಿರುವ ಹಿನ್ನೆಲೆಯಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಎಸ್ಎಸ್ಎಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಪ್ರಶ್ನೆ ಪತ್ರಿಕೆಯಲ್ಲಿ ಪ್ರಧಾನವಾಗಿದ್ದ ವಸ್ತುನಿಷ್ಠ ಮಾದರಿ ಪ್ರಶ್ನೆಗಳ ಪ್ರಮಾಣವನ್ನು ಕಡಿಮೆ ಮಾಡಲು ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಚಿಂತನೆ ನಡೆಸಿದೆ.
ಕಳೆದ ಮೊರು ವರ್ಷಗಳ ಹಿಂದೆ ಈ ನೂತನ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಲಾಗಿತ್ತು. ಆದರೆ ಈ ಪರೀಕ್ಷಾ ವಿಧಾನದ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದರಿಂದ ಹಾಗೂ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಲಿತಾಂಶ ಗಣನೀಯ ಕುಸಿತ ಕಂಡಿರುವ ಹಿನ್ನಲೆ ಎಸ್ಎಸ್ಎಲ್ ಸಿ ಪರೀಕ್ಷಾ ವಿಧಾನದ ಬದಲಾವಣೆ ಮಾಡಲು ಮಂಡಳಿ ಗಂಭೀರವಾಗಿ ಚಿಂತನೆ ನಡೆಸಿದೆ. ವಿಸ್ತ್ರತ ಉತ್ತರಗಳಿಗೆ ಅವಕಾಶವಿಲ್ಲದಿರುವುದು ಮತ್ತು ಅಗತ್ಯ ತರಬೇತಿ ವಿದ್ಯಾರ್ಥಿಗಳಿಗೆ ನೀಡದಿರುವುದು ಫಲಿತಾಂಶ ಕುಸಿತಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಕ್ಕೆ ಬಂದಿದ್ದಾರೆ.
ಈ ನೂತನ ಪರೀಕ್ಷಾ ವಿಧಾನದಲ್ಲಿ ಕಂಡು ಬಂದಿರುವ ಲೋಪದೋಷಗಳನ್ನು ಸರಿಪಡಿಸಲು ಹಾಗೂ ಸೂಕ್ಷ್ಮ ಮಾದರಿಯೊಂದನ್ನು ಶಿಫಾರಸ್ಸು ಮಾಡಲು ಶಿಕ್ಷಣ ಮಂಡಳಿ ಖ್ಯಾತ ಶಿಕ್ಷಣ ತಜ್ಞ ಡಾ.ಎಸ್. ಶ್ರೀಕಂಠಸ್ವಾಮಿ ನೇತೃತ್ವದ ಸಮಿತಿಯೊಂದನ್ನು ರಚಿಸಿದೆ. 10 ಸದಸ್ಯರನ್ನು ಒಳಗೊಂಡಿರುವ ಈ ಸಮಿತಿ ಈಗಾಗಲೇ ಹತ್ತು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ನಾಲ್ಕು ಸಾವಿರ ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸಿದೆ. ಸಹ ಶಿಕ್ಷಕರು, ಮುಖ್ಯಶಿಕ್ಷಕರು, ಪಿಯು ಕಾಲೇಜು ಉಪನ್ಯಾಸಕರು, ಪ್ರಾಚಾರ್ಯರು, ಶಿಕ್ಷಣ ತಜ್ಞರು ಹಾಗೂ ಪೋಷಕರಿಂದ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ವಸ್ತುನಿಷ್ಠ ಪ್ರಶ್ನೆಗಳ ಪದ್ದತಿಯನ್ನು ಬದಲಾವಣೆ ಮಾಡಬೇಕೆನ್ನುವುದು ಬಹುಕೇತ ಮಂದಿಯ ಅನಿಸಿಕೆಯಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಕುಸಿತಗೊಂಡ
ಎಸ್ಸೆಸ್ಸೆಲ್ಸಿ
2008
ಫಲಿತಾಂಶ
ಪ್ರಕಟ
2
ನೇ
ಪಿಯುಸಿ
ಫಲಿತಾಂಶದಲ್ಲಿ
ತೀವ್ರ
ಕುಸಿತ