ಅಖ್ತರ್ ಮೇಲೆ ಅಂಕೆ, ಮಾದಕ ವಸ್ತು ಸೇವನೆ ಶಂಕೆ
ನವದೆಹಲಿ, ಮೇ 17 : ಪಾಕಿಸ್ತಾನದಿಂದ ಭಾರತಕ್ಕೆ ಬಂದಿಳಿದ 'ರಾವಳ್ಪಿಂಡಿ ಎಕ್ಸ್ಪ್ರೆಸ್' ಶೋಯಾಬ್ ಅಖ್ತರ್ ದೆಹಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಪಟಪಟನೆ ನಾಲ್ಕು ವಿಕೆಟ್ ಕಿತ್ತು ಶಾರುಖ್ 'ಕಿಂಗ್' ಖಾನ್ರನ್ನು ಖುಷ್ ಮಾಡಿದ್ದರ ಹಿಂದಿನ ಹಕೀಕತ್ತಾದರೂ ಏನು?
ರಾವಳ್ಪಿಂಡಿ ಎಕ್ಸ್ಪ್ರೆಸ್ ಎಂದೇ ಖ್ಯಾತರಾಗಿರುವ ವೇಗದ ಬೌಲರ್ ಶೋಯಾಬ್ ಅಖ್ತರ್ ಪಾಕಿಸ್ತಾನದಿಂದ ವಿವಾದವನ್ನೂ ಹೊತ್ತು ತಂದಿದ್ದಾರೆ. ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಎಂಬಂತೆ ಶೋಯಾಬ್ ಜೊತೆಯೇ ವಿವಾದವೂ ಪಾಕಿಸ್ತಾನದಿಂದ ಬೆನ್ನತ್ತಿಕೊಂಡು ಬಂದಿದೆ.
ಐಪಿಎಲ್ನಲ್ಲಿ ಮೊದಲ ಪಂದ್ಯವಾಡಲು ಭಾರತದ ನೆಲದ ಮೇಲಿಳಿಯುವ ಮೊದಲು ಕರಾಚಿ ವಿಮಾನ ನಿಲ್ದಾಣ ಬಿಡುವ ವೇಳೆಯಲ್ಲಿ ಅಖ್ತರ್ ಬ್ಯಾಗಿನಲ್ಲಿ ಭಾರೀ ಪ್ರಮಾಣದ ಸಿರೀಂಜುಗಳು ದೊರೆತಿದ್ದು ಅಖ್ತರ್ ಶಕ್ತಿ ವೃದ್ಧಿಗಾಗಿ ಉದ್ದೀಪನ ಮದ್ದು ಸೇವಿಸಿರುವರೆಂಬ ಶಂಕೆ ಉದ್ಭವವಾಗಿದೆ.
ತಮ್ಮ ಎಂದಿನ ಉಡಾಫೆಯ ಶೈಲಿಯಲ್ಲಿ ಉದ್ದೀಪನ ಮದ್ದು ಸೇವಿಸಿರುವ ಸುದ್ದಿಯನ್ನು ಅಲ್ಲಗಳೆದಿರುವ ಶೋಯಾಬ್ ತಾನು ಡಯಾಬಿಟಿಕ್ ರೋಗಿಯಾಗಿರುವುದರಿಂದ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಲು ಸಿರೀಂಜ್ ಇಟ್ಟುಕೊಂಡಿದ್ದಾಗಿ ಹೇಳಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಸಿರೀಂಜುಗಳಲ್ಲಿ ಯಾವುದೇ ಪದಾರ್ಥ ಇರುವುದು ಪತ್ತೆಯಾಗಿಲ್ಲ.
ಸದ್ಯಕ್ಕೆ ಶೋಯಾಬ್ ಐಪಿಎಲ್ನ ನಿಯಮ ಮತ್ತು ನಿಯಂತ್ರಣಗಳಿಗೆ ಒಳಪಟ್ಟಿರುವುದರಿಂದ ಅವರ ಮೇಲೆ ಯಾವುದೇ ಕ್ರಮ ಅಥವ ಪರೀಕ್ಷೆ ನಡೆಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉತ್ತರಿಸಿದೆ.
ಆದರೆ, ಶೋಯಾಬ್ ಮತ್ತು ಪಿಸಿಬಿ ಸಮಜಾಯಿಷಿಯಿಂದ ಸಂತುಷ್ಟರಾಗದ ಐಪಿಎಲ್ ಚೇರ್ಮನ್ ಲಲಿತ್ ಮೋದಿ ಅವರು ಶನಿವಾರದಿಂದ ಯಾವುದೇ ಆಟಗಾರನನ್ನು ಯಾದೃಚ್ಛಿಕ ಮಾದರಿಯಲ್ಲಿ ಉದ್ದೀಪನ ಮದ್ದಿನ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ. ಸಿರೀಂಜ್ ದೊರೆತಿರುವ ಸುದ್ದಿಗೆ ತಳಬುಡವಿಲ್ಲದಿದ್ದರೂ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಹೇಳಿ ಪರೋಕ್ಷವಾಗಿ ಶೋಯಾಬ್ರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
(ಯುಎನ್ಐ)