ಹಾಳವೆಂಕಟಾಪುರ ಗ್ರಾಮದಲ್ಲಿ ಮತದಾನ ಬಹಿಷ್ಕಾರ
ರಾಯಚೂರು,ಮೇ 16 : ಒಂದು ಕಡೆ ಎರಡನೇ ಹಂತದ ಮತದಾನ ಬಿರುಸಿನಿಂದ ಸಾಗಿದ್ದು, ಇನ್ನೊಂದಡೆ ಕನಿಷ್ಠ ಮಟ್ಟದ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದಕ್ಕೆ ಆಕ್ರೋಶಗೊಂಡು ತಾಲೂಕಿನ ಹಾಳವೆಂಕಟಾಪುರ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ.
ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆಯೂ ಒಂದು. ಕಳೆದ 40 ವರ್ಷಗಳಿಂದ ಆರಿಸಿ ಬಂದಿರುವ ಯಾವ ಜನಪ್ರತಿನಿಧಿಗಳು ಕೂಡಾ ಇಲ್ಲಿನ ಕನಿಷ್ಟ ಮೂಲಭೂತ ಸಮಸ್ಯೆಗಳಾದ ರಸ್ತೆ, ನೀರು, ವಿದ್ಯುತ್, ಸಾರಿಗೆ ಸಂಪರ್ಕ, ಶಾಲೆ, ವಾಸಿಸಲು ಮನೆ ಇಲ್ಲದೇ ನರಕದಲ್ಲಿ ಬದುಕುತ್ತಿದ್ದಾರೆ. ಈ ಕುರಿತು ಅನೇಕ ಬಾರಿ ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕುಡಿಯಲು ನೀರಿಲ್ಲ, ಬೇರೆಡೆ ಹೋಗಬೇಕಾದರೆ ಬಸ್ ಗಳ ಸೌಲಭ್ಯಗಳಿಲ್ಲ ಇವೆಲ್ಲವುಗಳನ್ನು ಹೇಗಾದರೂ ಮಾಡಿ ಸಹಿಸಿಕೊಳ್ಳಬಹುದು. ಹೆರಿಗೆ ಸಮಸ್ಯೆಗೆ ಸೂಕ್ತ ಪ್ರಸೂತಿ ಚಿಕಿತ್ಸಾಲಯಗಳಿಲ್ಲ. ಹೆರಿಗೆ ನೋವಿನಿಂದ ಅನೇಕ ಮಹಿಳೆಯರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಇಷ್ಟೆಲ್ಲಾ ಆದರೂ ಜನಪ್ರತಿನಿಧಿಗಳು ಇತ್ತ ಕಣ್ಣೆತ್ತಿಯೂ ಸಹ ನೋಡುತ್ತಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾಯಿಸಬೇಕು. ಅದು ನಮ್ಮ ಕರ್ತವ್ಯ ಎನ್ನುವುದು ನಮಗೂ ಗೊತ್ತಿದೆ. ಆದರೆ ಪರಸ್ಥಿತಿ ಹೀಗಿದೆ, ನಮ್ಮ ಕೂಗು ಯಾರಿಗೂ ಕೇಳುತ್ತಿಲ್ಲ ಎನ್ನುತ್ತಾರೆ ಹಾಳ ವೆಂಕಟಾಪುರ ಗ್ರಾಮಸ್ಥರು. ರಾಜಕಾರಣಿಗಳ ಬಗ್ಗೆ ನಾವು ನಂಬಿಕೆಯನ್ನು ಕಳೆದುಕೊಂಡಿದ್ದೇವೆ. ಜಿಲ್ಲಾಧಿಕಾರಿಗಳು ನಮಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದಲ್ಲಿ ಮತ ಚಲಾಯಿಸಲು ಸಿದ್ಧವಿರುವುದಾಗಿ ಅವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications