ರಕ್ಷಣಾ ವೇದಿಕೆ ಬೆನ್ನು ಹತ್ತಿದ ರಾಜಕೀಯ ಪಕ್ಷಗಳು
ಬೆಂಗಳೂರು, ಮೇ 4: ಕರ್ನಾಟಕದಲ್ಲಿ ಪ್ರಾಬಲ್ಯ ಇರುವ ಕನ್ನಡಪರ ಸಂಘಟನೆಗಳ ಬೆಂಬಲ ಪಡೆದು ಅಧಿಕಾರದ ಗದ್ದುಗೆ ಏರಲು ವಿವಿಧ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಅದರಲ್ಲೂ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವ ಹಣಣಿಕೆಯಲ್ಲಿ ಹಲವಾರು ರಾಜಕೀಯ ಪಕ್ಷಗಳು ನಿರತವಾಗಿವೆ.
ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಕರ್ನಾಟಕ ರಕ್ಷಣಾ ವೇದಿಕೆಯ ಬೆನ್ನು ಹತ್ತಿವೆ. ರಾಜ್ಯವ್ಯಾಪಿ ಅನೇಕ ಕಾರ್ಯಕರ್ತರು ಹಾಗೂ ಸದಸ್ಯರನ್ನು ಹೊಂದಿರುವ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರನ್ನು ರಾಜಕೀಯ ಆಖಾಡಕ್ಕೆ ಕರೆತರಲು ಅವರನ್ನು ಓಲೈಸುತ್ತಿವೆ. ಒಂದು ವೇಳೆ ಕರವೇ ಯಾವುದಾದರೂ ಪಕ್ಷಕ್ಕೆ ಒಲಿದರೆ ಆ ಪಕ್ಷ ಗೆಲ್ಲುವುದು ಖಾಯಂ ಎಂದು ಭಾವಿಸಲಾಗಿದೆ. ಆದರೆ ಕರವೇ ಮಾತ್ರ ಯಾವ ಪಕ್ಷಕ್ಕೂ ಒಲಿದಿಲ್ಲ. ಇದುವರೆಗೆ ನಾರಯಣಗೌಡರು ಈ ವಿಷಯವಾಗಿ ಯಾವುದೇ ನಿರ್ಣಯ ಕೈಗೊಂಡಿಲ್ಲ.
ಚುನಾವಣೆ ದಿನಾಂಕ ಪ್ರಕಟನೆಯಾದಾಗಿನಿಂದ ತಮಗೆ ಇಂತಹ ಒತ್ತಡಗಳು ಬರುತ್ತಿವೆ. ಆದರೂ ತಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ನಾರಾಯಣಗೌಡರು ಸ್ಪಷ್ಟಪಡಿಸಿದ್ದಾರೆ. ರಾಜ್ಯಮಟ್ಟದ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ಅವರು ತಿಳಿಸಿದ್ದಾರೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆಸಿರುವ ಅವರು ಮತ್ತೊಮ್ಮೆ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿ ಹೇಳಿದ್ದಾರೆ. ಕರವೇ ರಾಜಕೀಯ ಪ್ರವೇಶ ಮಾಡುತ್ತದೋ ಇಲ್ಲವೊ ಎನ್ನುವುದನ್ನು ಕಾದು ನೋಡಬೇಕಾಗಿದೆ.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications