ಯಡಿಯೂರಪ್ಪಗೆ ಭವಿಷ್ಯ ಉಜ್ವಲ : ಜ್ಯೋತಿಷಿ
ಬೆಂಗಳೂರು,ಏ.23: ಮತದಾನದ ದಿನ ಹತ್ತಿರವಾಗುತ್ತಿದ್ದಂತೆಯೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ದೇವಸ್ಥಾನ- ಮಂದಿರಗಳಿಗೆ ತೆರಳಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಿರುವುದು ಸಾಮಾನ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಚಾಮರಾಜಪೇಟೆಯಲ್ಲಿರುವ ಶಂಕರಮಠಕ್ಕೆ ಭೇಟಿ ನೀಡಿ ಶಾರದಾಂಬೆಗೆ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಖ್ಯಾತ ಜ್ಯೋತಿಷಿ ಸೋಮಯಾಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದಯಡಿಯೂರಪ್ಪ, ತಮ್ಮ ಮುಂದಿನ ಭವಿಷ್ಯದ ಬಗ್ಗೆ ತಿಳಿದುಕೊಂಡರು. ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಯಡಿಯೂರಪ್ಪ ಹೊರಬಂದಾಗ ಪ್ರಸನ್ನಚಿತ್ತರಂತೆ ಕಂಡುಬಂದಿದ್ದು ವಿಶೇಷವಾಗಿತ್ತು.ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರ ಭವಿಷ್ಯ ಉಜ್ವಲವಾಗಿದೆ ಎಂದು ಜ್ಯೋತಿಷಿ ಸೋಮಯಾಜಿ ಭವಿಷ್ಯ ನುಡಿದಿದ್ದಾರೆ.
ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕಳೆದ ಭಾರಿಗಿಂತ ಈ ಸಲ ಅತೀ ಹೆಚ್ಚು ಸ್ಥಾನಗಳನ್ನು ಪಕ್ಷ ಗಳಿಸಲಿದೆ. ಬಿಜೆಪಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವ ಆತ್ಮವಿಶ್ವಾಸದಲ್ಲಿ ತೇಲುತ್ತಿರುವ ಯಡಿಯೂರಪ್ಪ, ಇಂದು ಜ್ಯೋತಿಷಿಗಳು ಹೇಳಿದ ಮಾತಿನಿಂದ ಮತ್ತಷ್ಟು ಖುಷಿಯಿದ್ದಂತೆ ಕಂಡು ಬಂದಿತು.
ಹಾಗೆಯೇ ರಾಜ್ಯಾದ್ಯಂತ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ ಪಕ್ಷದ ಅಭ್ಯರ್ಥಿಗಳು ದೇವಸ್ಥಾನಕ್ಕೆ ತೆರಳಿ ಪೂಜೆ ಹೋಮ-ಹವನಗಳಲ್ಲಿ ಮುಳುಗಿರುವುದು ಸಾಮಾನ್ಯ ದೃಶ್ಯವಾಗಿದೆ. ಚುನಾವಣೆ ಅಖಾಡಕ್ಕೆ ನಿಂತು ತಮ್ಮ ಅದೃಷ್ಟವನ್ನು ಒರೆಗೆ ಹಚ್ಚಿರುವ ನೆಚ್ಚಿನ ನಾಯಕರು ಗೆಲುವು ಸಾಧಿಸಲಿ ಎಂದು ಕಾರ್ಯಕರ್ತರೂ ಕೂಡಾ ಮಠ ದೇವಸ್ಥಾನಗಳತ್ತ ದೌಡಾಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಪ್ರಮಿಳಾ
ನೇಸರ್ಗಿಯೂ
ಮಂತ್ರಿಸಿದ
ನಿಂಬೆಹಣ್ಣೂ
ಜ್ಯೋತಿಷಿ
ಸೋಮಯಾಜಿ
ಹೇಳಿದ್ದ
ಭವಿಷ್ಯ
ಸುಳ್ಳಾಗಿದೆಯಾ?