ಮೊದಲ ಹಂತದ ಮತದಾನಕ್ಕೆ ಅಧಿಸೂಚನೆ ಪ್ರಕಟ
ಬೆಂಗಳೂರು,ಏ.16: ರಾಜ್ಯ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆಯುವ ಹನ್ನೂಂದು ಜಿಲ್ಲೆಗಳ 89 ಕ್ಷೇತ್ರಗಳಲ್ಲಿ ಚುನಾವಣೆ ಅಧಿಸೂಚನೆ ಇಂದು ಪ್ರಕಟಗೊಂಡಿದೆ.
ಜಿಲ್ಲಾಧಿಕಾರಿಗಳು ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಮೇ. 10 ರಂದು ಮತದಾನ ನಡೆಯಲಿವೆ. 11 ಜಿಲ್ಲೆಗಳ 89 ಕ್ಷೇತ್ರಗಳಲ್ಲಿ 17 ಮೀಸಲು ಕ್ಷೇತ್ರಗಳಿವೆ. ಇದರಲ್ಲಿ ಎಚ್.ಡಿ.ಕೋಟೆ ಪರಿಶಿಷ್ಟ ವರ್ಗಕ್ಕೆ ಮೀಸಲಾದ ಕ್ಷೇತ್ರವಾಗಿದೆ.
ಚುನಾವಣೆಗೆ ಸ್ಪರ್ಧಿಸಲು ಇಚ್ಛೆಯಿರುವ ಅಭ್ಯರ್ಥಿಗಳು ಇಂದಿನಿಂದಲೇ ನಾಮಪತ್ರಗಳನ್ನು ಸಲ್ಲಿಸಬಹುದು. ಏ.23 ರ ಸಂಜೆ 5 ಗಂಟೆವರೆಗೆ ನಾಸಪತ್ರ ಸಲ್ಲಿಸಲು ಅವಕಾಶವಿರುತ್ತದೆ. ಏ.24 ರಂದು ನಾಮಪತ್ರಗಳನ್ನು ಪರಿಶೀಲನೆ ಮಾಡಲಾಗುವುದು. ನಾಮಪತ್ರವನ್ನು ವಾಪಸ್ ಪಡೆಯಲು ಏ.26 ಕೊನೆಯ ದಿನವಾಗಿರುತ್ತದೆ. ಕ್ಷೇತ್ರ ಪುನರ್ವಿಂಗಡನೆ ನಂತರ ಮೊದಲ ಚುನಾವಣೆ ಇದಾಗಿದ್ದು, 13ನೇ ವಿಧಾನಸಭೆ ಅಸ್ತಿತ್ವಕ್ಕೆ ಪ್ರಮುಖ ಕಾರಣವಾಗಲಿದೆ.
ಏ.2ರಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಅದು ಚುನಾವಣೆ ಮುಗಿಯುವವರೆಗೊ ಜಾರಿಯಲ್ಲಿರುತ್ತದೆ. ನಾಮಪತ್ರಗಳನ್ನು ಸಲ್ಲಿಸಲು ಚುನಾವಣಾ ಆಯೋಗ ನಿರ್ಬಂಧಗಳನ್ನು ಹೇರಿದ್ದು, ನಾಮಪತ್ರ ಸಲ್ಲಿಸುವ ಅಭ್ಯರ್ಥಿಯು ತನ್ನ ಜತೆಗೆ ಐದು ಮಂದಿ ಬೆಂಬಲಿಗರನ್ನು ಮಾತ್ರ ಚುನಾವಣಾಧಿಕಾರಿ ಇರುವ ಕಚೇರಿಗೆ ಕರೆದೊಯ್ಯಬಹುದು. ನಾಮಪತ್ರಗಳನ್ನು ಸಲ್ಲಿಸಲು ಮೆರವಣಿಗೆ ಮೂಲಕ ತೆರಳುವುದಕ್ಕೂ ಅನುಮತಿಯನ್ನು ಪಡೆಯಬೇಕು ಎಂದು ಆಯೋಗ ಆದೇಶ ನೀಡಿದೆ.
ನೀತಿ ಸಂಹಿತೆ ಉಲ್ಲಂಘನೆ: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ರಾಜ್ಯದ್ಯಂತ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಅವರನ್ನು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಹಳ್ಳಿಗಳಲ್ಲಿ ಸಿಮೆಂಟ್ ಹಂಚಲು ದಾಸ್ತಾನು ಮಾಡಿದ್ದರು ಎಂಬ ದೂರಿನ ಮೇಲೆ ಜಿಲ್ಲಾಧಿಕಾರಿ ಭೇಟಿ ನೀಡಿ ಅದನ್ನು ವಶಪಡಿಸಿಕೊಂಡಿದ್ದರು.
ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಅವರ ಕಾರನ್ನು ವಶಪಡಿಸಿಕೊಂಡಿದ್ದಾರೆ. ಸ್ವಕ್ಷೇತ್ರ ನಾಗಮಂಗಲದ ಹಳ್ಳಿಗಳಲ್ಲಿ ವಾಹನಗಳ ಮೊಲಕ ಚುನಾವಣೆ ಪ್ರಚಾರದಲ್ಲಿ ಕೈಗೊಂಡಿದ್ದರು, ಚುನಾವಣಾಧಿಕಾರಿಗಳಿಂದ ಪರವಾನಿಗೆ ಪಡೆಯದ ವಾಹನಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮವಾಗಿ ಸೀರೆಗಳನ್ನು ದಾಸ್ತಾನು ಮಾಡಿದ ಆರೋಪದ ಮೇಲೆ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ವಿರುದ್ಧ ಚುನಾವಣಾಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)