ಬಳ್ಳಾರಿ ಗಣಿ ಧಣಿಗಳ ವಿರುದ್ಧ ಕಾಂಗ್ರೆಸ್ನ ಅಸ್ತ್ರ
ಬಳ್ಳಾರಿ, ಏ.16: ಗಣಿ ದೊರೆಗಳ ಭದ್ರ ಕೋಟೆ ಬಳ್ಳಾರಿ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಬಲ ಅಸ್ತ್ರವನ್ನು ಸಂಪಾದಿಸಿದೆ. ಬಿಜೆಪಿ ತೊರೆದಿರುವ ಅನಿಲ್ ಲಾಡ್ರನ್ನು ಬಳ್ಳಾರಿ ನಗರದಿಂದ ಸ್ಪರ್ಧೆಗೆ ಇಳಿಸುವ ಸಿದ್ಧತೆಯಲ್ಲಿದೆ.
2004ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅನಿಲ್ ಲಾಡ್ಗೆದ್ದಿದ್ದರು. ಆದರೆ ಈಗ ಬಿಜೆಪಿ ತೊರೆದಿರುವ ಅವರು, ಶಿಸ್ತು, ಸಿದ್ಧಾಂತಗಳನ್ನು ಬಿಜೆಪಿ ಗಾಳಿಗೆ ತೂರಿದೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ತಾವು ಕೊನೆ ಗಳಿಗೆಯಲ್ಲಿ ಬಿಜೆಪಿ ಸೇರಿದ್ದು ಅದೊಂದು ಕಹಿ ಅನುಭವ ಎನ್ನುತ್ತಾರೆ. ಬಿಜೆಪಿಯಲ್ಲಿನ ಕಲುಷಿತ ವಾತಾವರಣದಿಂದ ಬೇಸತ್ತು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಕಾಂಗ್ರೆಸ್ನ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅವರ ನಿವಾಸದಲ್ಲಿ ಮಂಗಳವಾರ ತಮ್ಮ ಮನೋಭಿಪ್ರಾಯವನ್ನು ತಿಳಿಸಿದರು.
ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ತೀವ್ರ ಅನ್ಯಾಯವಾಗುತ್ತಿದೆ. ಟಿಕೆಟ್ ಹಂಚಿಕೆಯ ವ್ಯವಹಾರಗಳಿಗೆ ಬಳ್ಳಾರಿಯಿಂದಲೇ ನಡೆಯುತ್ತಿದೆ. ಏಳು ಜಿಲ್ಲೆಗಳ ವ್ಯಾಪ್ತಿಗೆ ಬರುವ ಟಿಕೆಟ್ಗಳನ್ನು ಪಡೆಯಬೇಕಾದರೆ ಇಲ್ಲಿನವರ ಅನುಮತಿ ಬೇಕು. ಇದರ ಹಿಂದಿರುವ ಮಸಲತ್ತಾದರು ಏನು ಎಂದು ಲಾಡ್ ಪ್ರಶ್ನಿಸಿದ್ದಾರೆ.ಲಿಂಗಾಯಿತ ಹಾಗೂ ಮುಸ್ಲಿಂ ಜನಾಂಗಕ್ಕೆ ಸಿಗಬೇಕಾದ ಸ್ಥಾನಮಾನಗಳು ಸಿಕ್ಕಿಲ್ಲ. ಅವರಿಗೆ ತೀವ್ರ ಅನ್ಯಾಯವಾಗಿದೆ. ನನ್ನಂತಹ ಸಣ್ಣಪುಟ್ಟ ಮರಾಠಿ ಜನಾಂಗಕ್ಕೆ ನ್ಯಾಯ ಸಿಗುವುದಾದರೂ ಹೇಗೆ ಎಂದ ಲಾಡ್ ಗಣಿ ರೆಡ್ಡಿಗಳ ವಿರುದ್ಧ ಸಿಟ್ಟಾದರು.
ಬಳ್ಳಾರಿ ರೆಡ್ಡಿ ತ್ರಯರ ಮೂಗಿನ ನೇರಕ್ಕೆ ಎಲ್ಲವೂ ನಡೆಯುತ್ತಿದೆ, ಪಕ್ಷದ ನಿಷ್ಠಾವಂತರ ಮಾತಿಗೆ ಇಲ್ಲಿ ಕವಡೆ ಕಾಸಿನ ಬೆಲೆಯಿಲ್ಲ ಎಂದು ಸಂಸದ ಕರುಣಾಕರ ರೆಡ್ಡಿ ವಿಧಾನಪರಿಷತ್ ಸದಸ್ಯರಾದ ಜನಾರ್ಧನರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಅವರ ಹೆಸರನ್ನು ಹೇಳದೆ ಅವರ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದರೆ ಬಳ್ಳಾರಿಯಿಂದ ಸ್ಪರ್ಧಿಸುವ ಇಂಗಿತವನ್ನು ಅನಿಲ್ ಲಾಡ್ ವಕ್ತಪಡಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)