ನದಿಗೆ ಬಸ್ ಉರುಳಿ 44 ವಿದ್ಯಾರ್ಥಿಗಳ ದಾರುಣ ಸಾವು
ಬರೋಡ, ಏ.16 : ಗುಜರಾತ್ ಸಾರಿಗೆ ಇಲಾಖೆ ಬಸ್ ಚಾಲಕನ ಅಜಾಗರೂಕತೆಯಿಂದ ಇಲ್ಲಿಂದ 65 ಕಿ.ಮೀ. ದೂರದಲ್ಲಿರುವ ಬೋಡೇಲಿ ಬಳಿ ನರ್ಮದಾ ನದಿ ಕಾಲುವೆಗೆ ಬಸ್ ಉರುಳಿ 44 ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ವಿದ್ಯಾರ್ಧಿಗಳು ವಾರ್ಷಿಕ ಪರೀಕ್ಷೆ ಬರೆಯಲು ಬೋಡೇಲಿಗೆ ತೆರಳುತ್ತಿದ್ದರು. 60ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಿಕೊಂಡಿದ್ದ ಬಸ್ಸಿನ ಚಾಲಕ ನಿದ್ದೆ ಮಂಪರಿನಲ್ಲಿದ್ದ ಎಂದು ತಿಳಿದುಬಂದಿದೆ. ಈ ಅಪಘಾತ ಬೆಳಗಿನ ಜಾವ 6.30ಕ್ಕೆ ಸಂಭವಿಸಿದೆ. ಸೇತುವೆ ಮೇಲಿಂದ ಬಸ್ ದಾಟುವಾಗ ನಿಯಂತ್ರಣ ತಪ್ಪಿ 60 ಅಡಿ ಮೇಲಿನಿಂದ ನದಿಗೆ ಉರುಳಿದೆ. ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು.
ನದಿ ತುಂಬಿ ಹರಿಯುತ್ತಿದ್ದರಿಂದ ಬಸ್ ಸಂಪೂರ್ಣ ಮುಳುಗಿ ಹೆಚ್ಚಿನ ವಿದ್ಯಾರ್ಥಿಗಳು ಬಸ್ಸಿನಲ್ಲಿಯೇ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 31 ಬಾಲಕಿಯರು ಮತ್ತು 10 ಬಾಲಕರು ಸೇರಿದ್ದಾರೆ. ಚಾಲಕ ಮತ್ತು ನಿರ್ವಾಹಕರೂ ಮೃತಪಟ್ಟಿದ್ದು ಇಲ್ಲಿಂದ 2 ಕಿ.ಮೀ. ದೂರದಲ್ಲಿರುವ ಸಿವಿಲ್ ಆಸ್ಪತ್ರೆಯಲ್ಲಿ ಅವರ ದೇಹಗಳನ್ನು ಇಡಲಾಗಿದೆ. ನಾಲ್ವರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. 44 ದೇಹಗಳನ್ನು ಹುಡುಕಲಾಗಿದ್ದು ಉಳಿದವರನ್ನು ಹುಡುಕುವ ಕಾರ್ಯಾಚರಣೆ ಜಾರಿಯಲ್ಲಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ.
ಕಾರ್ಯಾಚರಣೆ ಸುಗಮವಾಗಲೆಂದು ಸರ್ದಾರ್ ಸರೋವರ ಅಣೆಕಟ್ಟೆಯಿಂದ ಕಾಲುವೆಗೆ ನೀರು ಹರಿಯುವುದನ್ನು ನಿಲ್ಲಿಸಲಾಗಿದೆ. ಎರಡು ಡಜನ್ಗೂ ಹೆಚ್ಚಿನ ಈಜುಗಾರರು ಮೃತದೇಹ ಪತ್ತೆ ಮಾಡುವಲ್ಲಿ ನಿರತರಾಗಿದ್ದಾರೆ.
(ಯುಎನ್ಐ)
ವಿಡೀಯೋ: ನರ್ಮದಾ ನದಿ ಬಸ್ ದುರಂತದ ನಂತರ