ಏ.4ರಂದು ತಮಿಳು ಚಿತ್ರೋದ್ಯಮ ಭಾರೀ ಪ್ರತಿಭಟನೆ
ಚೆನ್ನೈ, ಏ. 1 : ಕರ್ನಾಟಕದಲ್ಲಿ ತಮಿಳು ಚಲನಚಿತ್ರ ಪ್ರದರ್ಶನ ಮತ್ತು ತಮಿಳು ವಾಹಿನಿಗಳ ಪ್ರಸಾರಕ್ಕೆ ಅಡ್ಡಿ ಉಂಟುಮಾಡುತ್ತಿರುವ ಕನ್ನಡಿಗರ ವಿರುದ್ಧ ತಮಿಳು ಚಿತ್ರರಂಗದಲ್ಲಿ ವಿರೋಧದ ಅಲೆಗಳು ಹುಟ್ಟಿಕೊಂಡಿವೆ. ಕನ್ನಡಿಗರ ಈ "ಭಾಷಾಂಧತೆಯನ್ನು" ಖಂಡಿಸುವ ಸಲುವಾಗಿ ಇಡೀ ತಮಿಳು ಚಿತ್ರರಂಗ ಏಪ್ರಿಲ್ 4 ರಂದು ಭಾರೀ ಪ್ರತಿಭಟನೆ ನಡೆಸಲು ಸಜ್ಜಾಗಿದೆ ಎಂದು ತಮಿಳು ಚಿತ್ರ ನಿರ್ಮಾಪಕರು ಘೋಷಿಸಿದ್ದಾರೆ.
ಇಂದು ಚೆನ್ನೈನಲ್ಲಿ ನಡೆದ ತಮಿಳು ಚಿತ್ರ ನಿರ್ಮಾಪಕರ ಸಂಘದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಅಧ್ಯಕ್ಷ ರಾಮನಾರಾಯಣನ್ ಮತ್ತು ಉಪಾಧ್ಯಕ್ಷ ಶಿವಶಕ್ತಿ ಪಾಂಡ್ಯನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಲಾವಿದರ ಸಂಘದ ಪರವಾಗಿ ವಿಜಯ್ ಕುಮಾರ್ ಮತ್ತು ಸತ್ಯರಾಜ್ ಭಾಗವಹಿಸಿದ್ದರು.
ಆ ದಿನ ಚಿತ್ರರಂಗದ ಎಲ್ಲ ಚಟುವಟಿಕೆಗಳನ್ನು ರದ್ದುಮಾಡಿ, ಸತ್ಯಾಗ್ರಹಕ್ಕಾಗಿ ಚೆನ್ನೈನಲ್ಲಿ ಧರಣಿ ಹೂಡಲು ನಿರ್ಧರಿಸಲಾಯಿತು. ಈ ಪ್ರತಿಭಟನೆಯಲ್ಲಿ ಸಿನಿತಾರೆಯರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರನಿರ್ಮಾಣದಲ್ಲಿ ತೊಡಗಿರುವ ಎಲ್ಲ ಘಟಕಗಳೂ ಪಾಲ್ಗೊಳ್ಳಲಿವೆ. ಪ್ರದರ್ಶಕರ ವಲಯದ ಬೆಂಬಲವೂ ಇರುವುದರಿಂದಾಗಿ ಏಪ್ರಿಲ್ 4ರಂದು ತಮಿಳುನಾಡಿನಲ್ಲಿ ಚಿತ್ರಪ್ರದರ್ಶನವೂ ರದ್ದಾಗುವ ಸಂಭವವಿದೆ.
ತಮಿಳುನಾಡಿನ ವಿವಾದಾತ್ಮಕ ಹೊಗೇನಕ(ಲ್ಲು)ಲ್ ಕುಡಿಯುವ ನೀರಿನ ಯೋಜನೆಯನ್ನು ಪ್ರತಿಭಟಿಸಿ ಕರ್ನಾಟಕದಲ್ಲಿ ತಮಿಳು ಚಿತ್ರ ಪ್ರದರ್ಶನಕ್ಕೆ ಕನ್ನಡ ಸಂಘಸಂಸ್ಥೆಗಳು ಅಡ್ಡಿಪಡಿಸುತ್ತಿರುವುದಕ್ಕೆ ಮಾರುತ್ತರವಾಗಿ ತಮಿಳು ಚಿತ್ರರಂಗವು ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಚಳವಳಿಯನ್ನು ಆರಂಭಿಸಿದೆ.
ಇದೇವೇಳೆ, ತಮಿಳುನಾಡು ವಿಧಾನಸಭೆಯಲ್ಲಿ ಇಂದು ಈ ವಿಷಯವನ್ನು ವ್ಯಾಪಕವಾಗಿ ಚರ್ಚಿಸಲಾಯಿತು. ಹೊಗೇನಕಲ್ ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸುವ ಹಾಗೂ ಅದರ ನೆಪದಲ್ಲಿ ತಮಿಳು ಚಿತ್ರಗಳಿಗೆ ಹಿಂಸೆ ಕೊಡುವ ಕನ್ನಡಿಗರ ವಿರುದ್ಧ ಶಾಸಕರು ಕೆಂಡಾಮಂಡಲವಾದರು. ಇಡೀ ತಮಿಳುನಾಡು ವಿಧಾನಸಭೆಯು ಪಕ್ಷ ಬೇಧ ಮರೆತು ಕರ್ನಾಟಕದ ನಿಲುವನ್ನು ಖಂಡಿಸಿತಲ್ಲದೆ ಈ ಕೂಡಲೇ ಕೇಂದ್ರ ಸರಕಾರ ಮಧ್ಯಪ್ರವೇಶಿ ನ್ಯಾಯದೊರಕಿಸಿಕೊಡಬೇಕೆಂದು ಆಗ್ರಹಿಸುವ ನಿಲುವಳಿಯನ್ನು ಅಂಗೀಕರಿಸಿತು.
ಕನ್ನಡಿಗರ ವಿರುದ್ಧ ತೀರ್ವ ವಾಗ್ದಾಳಿ ನಡೆಸಿದ ಕರುಣಾನಿಧಿ ಕನ್ನಡಪರ ಸಂಘಟನೆಗಳನ್ನು ಮತ್ತು ರಾಜ್ಯ ಬಿಜೆಪಿ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡರು. ಉದ್ದಕ್ಕೂ ಕೋಮು ರಾಜಕೀಯ ಮಾಡಿಕೊಂಡು ಬಂದಿರುವ ಬಿಜೆಪಿ ಈಗ ಭಾಷೆ ಮತ್ತು ನೀರಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದುಯಡಿಯೂರಪ್ಪ ವಿರುದ್ಧ ಹರಿಹಾಯ್ದರು.
ಹೊಗೇನಕಲ್ ಯೋಜನೆ ವಿಷಯದಲ್ಲಿ ಮುಖ್ಯಮಂತ್ರಿ ಕರುಣಾನಿಧಿಯವರು ಆಡಿದ ಆಕ್ಷೇಪಾರ್ಹ ಮಾತುಗಳು ಕನ್ನಡಿಗರನ್ನು ಕೆರಳಿಸಿದ್ದವು. ಅವರು ಕ್ಷಮಾಪಣೆ ಕೇಳಬೇಕು ಇಲ್ಲವಾದಲ್ಲಿ ತಮಿಳು ಚಿತ್ರಗಳಿಗೆ ಕರ್ನಾಟಕದಲ್ಲಿ ಆಜೀವ ನಿರ್ಬಂಧ ಹೇರುವುದಾಗಿ ಕರ್ನಾಟಕ ಹಿತರಕ್ಷಣಾ ವೇದಿಕೆ ಬೆದರಿಕೆ ಬಾಂಬು ಹಾಕಿತ್ತು.
(ಏಜೆನ್ಸೀಸ್)