ತಮಿಳು ಟಿವಿ, ಸಿನಿಮಾಗಳಿಗೆ ತಡೆ ಒಡ್ಡುತ್ತೇವೆ: ಕರವೇ
ಮೈಸೂರು, ಮಾ.30: ಹೊಗೇನಕಲ್ನಲ್ಲಿ ತಮಿಳುನಾಡು ಸರ್ಕಾರ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆಯನ್ನು ಕೂಡಲೆ ನಿಲ್ಲಿಸಬೇಕು. ಒಂದು ವೇಳೆ ಏ.8ರ ಒಳಗೆ ನಿಲ್ಲಿಸದಿದ್ದರೆ ಏ.9ರಂದು ಕರ್ನಾಟಕದಾದ್ಯಂತ ತಮಿಳು ಟಿವಿ ವಾಹಿನಿಗಳು ಮತ್ತು ಸಿನಿಮಾಗಳಿಗೆ ತಡೆ ಒಡ್ಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕರವೇರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ಏ.9ರಿಂದ ತಮಿಳುನಾಡಿನ ವಾಹನಗಳು ಕರ್ನಾಟಕಕ್ಕೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗುವುದು. ತಮಿಳುನಾಡು ಸರ್ಕಾರ ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ಹೊಗೇನಕಲ್ ಪ್ರದೇಶವನ್ನು ಕಬಳಿಸಲು ಹವಣಿಸುತ್ತಿದೆ. ತಮಿಳುನಾಡು ಸರ್ಕಾರ ಈ ಯೋಜನೆಯನ್ನು ಈ ಕೂಡಲೆ ಕೈಬಿಡಬೇಕು. ಇಲ್ಲದಿದ್ದ ಪಕ್ಷ ನಾವು ತಮಿಳುನಾಡಿನ ವಿರುದ್ಧ ಎಲ್ಲಾ ವಿಧದಲ್ಲೂ ಹೋರಾಡುವುದಕ್ಕೆ ಸಿದ್ಧವಿರುವುದಾಗಿ ತಿಳಿಸಿದರು.
ಹೊಗೇನಕಲ್ನಲ್ಲಿ ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಜಂಟಿಯಾಗಿ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ಮುಗಿಯುವವರೆಗೂ ಹೊಗೇನಕಲ್ನಲ್ಲಿ ಯಾವುದೇ ಕಾಮಗಾಗಿ ನಡೆಯದಂತೆ ನೋಡಿಕೊಳ್ಳಬೇಕು ಎಂದರು. ಹೊಗೇನಕಲ್ ಪ್ರದೇಶದಲ್ಲಿ ತಮಿಳುನಾಡು ಕೈಗೊಂಡಿರುವ ಯೋಜನೆಗಳ ಸಂಬಂಧ ಮಂಗಳವಾರ ಬೆಂಗಳೂರಿನಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳೊಂದಿಗೆ ಸಭೆ ಸೇರಿ ಚರ್ಚಿಸಲಾಗುತ್ತದೆ. ಸೋಮವಾರ ಚಾಮರಾಜನಗರದಲ್ಲಿ ಸಾರ್ವಜನಿಕ ಸಭೆ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)