ಏತ ನೀರಾವರಿ ತಡೆಗೆ ತಮಿಳುನಾಡು ಆಗ್ರಹ
ನವದೆಹಲಿ, ಮಾ.26:ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ಆದೇಶವನ್ನು ಕರ್ನಾಟಕ ಉಲ್ಲಂಘಿಸುತ್ತಿದೆ. ಕರ್ನಾಟಕದ ಏತ ನೀರಾವರಿ ಹಾಗೂ ಹೆಚ್ಚಿನ ನೀರಿನ ಬಳಕೆಯನ್ನು ತಡೆಯಬೇಕೆಂದು ಕೋರಿ ತಮಿಳುನಾಡು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಏತ ನೀರಾವರಿ ಮತ್ತಿತರ ಯೋಜನೆಗಳನ್ನು ಮುಂದುವರಿಸದಂತೆ ಕರ್ನಾಟಕಕ್ಕೆ ತಾಕೀತು ಮಾಡಬೇಕು ಎಂದು ತಮಿಳುನಾಡು ಅರ್ಜಿಯಲ್ಲಿ ಮನವಿ ಮಾಡಿದೆ. ಕರ್ನಾಟಕದ ಈ ಯೋಜನೆಗಳಿಂದ ತನ್ನ ರಾಜ್ಯದ ಕೃಷಿ ಚಟುವಟಿಕೆಗಳಿಗೆ ತೊಡಕಾಗುತ್ತದೆ. ತಮಿನಾಡು ನೀರಾವರಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಯಾವುದೇ ನೀರಿನ ಸಂಗ್ರಹಕ್ಕೆ ಕಾವೇರಿ ನ್ಯಾಯ ಮಂಡಳಿಯ ಅಂತಿಮ ವರದಿ ಅನುಮತಿ ನೀಡಿಲ್ಲ.ಹಾಗಾಗಿ ಕರ್ನಾಟಕ ಯಾವುದೇ ನೀರಾವರಿ ಯೋಜನೆಗಳನ್ನು ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ತಮಿಳುನಾಡಿನ ವಕೀಲ ಕೆ.ಪರಶುರಾಮ್ ಮತ್ತು ಆರ್.ಎನ್.ಎಡುಮಾರನ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕವು ನಿಗದಿಯಲ್ಲದ ತಗ್ಗು ಪ್ರದೇಶಗಳಲ್ಲಿ ಸಣ್ಣಪುಟ್ಟ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ಇದು 2007ರ ಕಾವೇರಿ ನ್ಯಾಯ ಮಂಡಳಿಗೆ ವಿರುದ್ಧ. ನ್ಯಾಯ ಮಂಡಳಿ ತೀರ್ಪಿನ ಅನುಸಾರ ತನಗೆ ಸಾಕಷ್ಟು ನೀರನ್ನು ಬಿಡುವಂತೆ ತಮಿಳುನಾಡು ಕೋರಿದೆ. ತಮಿಳುನಾಡು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆಯಾಗಿ ಕರ್ನಾಟಕ ಸಹ ಪ್ರಮಾಣ ಪತ್ರ ಸಲ್ಲಿಸಿದೆ.
(ಏಜೆನ್ಸೀಸ್)