2237 5014; ಹಲೋ ಲೋಕಾಯುಕ್ತನಾ?
ಬೆಂಗಳೂರು, ಮಾ.26: ನೀತಿಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನು ಮಟ್ಟಹಾಕಲು ದಿನದ 24 ಗಂಟೆಯೂ ದೂರು ಹೇಳಬಹುದಾದ ಲೋಕಾಯುಕ್ತರ ಸಹಾಯವಾಣಿ ಹಾಗೂ ಆನ್ಲೈನ್ ಸೇವೆ ಮಂಗಳವಾರ ಪ್ರಾರಂಭವಾಯಿತು. ಕರ್ನಾಟಕದ ರಾಜ್ಯಪಾಲ ರಾಮೇಶ್ವರ್ ಠಾಕೂರ್ ದೇಶದ ಮೊದಲ ಭ್ರಷ್ಟಾಚಾರ ತಡೆ ವಾಹಿನಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಮಾತನಾಡುತ್ತಾ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಹೊಸ ಹೆಜ್ಜೆ ಇಟ್ಟಿದ್ದೇವೆ. ಸಾರ್ವಜನಿಕರು ಭ್ರಷ್ಟ ಸರ್ಕಾರಿನೌಕರರು ಮತ್ತು ಅಧಿಕಾರಿಗಳ ವಿರುದ್ಧ ದೂರು ನೀಡಬಹುದು. ಲೊಕಾಯುಕ್ತದ ಸಹಾಯವಾಣಿ ಮತ್ತು ಆನ್ಲೈನ್ ಸೇವೆ ಹಗಲು ರಾತ್ರಿ ಎನ್ನದೆ ದಿನದ 24ಗಂಟೆಯೂ ಸಾರ್ವಜನಿಕರಿಗೆ ಲಭಿಸಲಿದೆ ಎಂದರು.
ಭ್ರಷ್ಟ ವ್ಯವಸ್ಥೆ ಮತ್ತು ಅಧಿಕಾರಿಗಳ ವರ್ತನೆಯಿಂದ ಬೇಸತ್ತಿರುವ ಸಾರ್ವಜನಿಕರಿಗೆ ಲೋಕಾಯುಕ್ತದ ನೂತನ ಸಹಾಯವಾಣಿ ಮತ್ತು ಆನ್ಲೈನ್ ಸೇವೆ ಸಹಕರಿಸಲಿದೆ. ಇವುಗಳ ನೆರವಿನಿಂದ ಸಾರ್ವಜನಿಕರು ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಭ್ರಷ್ಟ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಬಹುದು ಎಂದು ರಾಜ್ಯಪಾಲ ಠಾಕೂರ್ ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದರೆ, ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರೆ ಸಾರ್ವಜನಿಕರು ಸಹಾಯವಾಣಿ ಮೂಲಕ ಅಹವಾಲು ಸಲ್ಲಿಸಬಹುದು. ದಿನದ 24 ಗಂಟೆಗಳ ಕಾಲ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಮುಂದಿನ ಎರಡು ವಾರದೊಳಗೆ ಸಾರ್ವಜನಿಕರಿಗೆ ಸಹಾಯವಾಣಿಯನ್ನು ಉಚಿತವಾಗಿ(080-2237 5014) ಕಲ್ಪಿಸಲಾಗುತ್ತದೆ ಎಂದು ಸಂತೋಷ್ ಹೆಗಡೆ ತಿಳಿಸಿದರು.
ಉಪ ಲೋಕಾಯುಕ್ತ ಪತ್ರಿ ಬಸವನಗೌಡ, ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್.ತಾರಕನ್, ಪಿ.ಪಿ.ಪ್ರಭು, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ವತ್ಸಲಾ ವತ್ಸ, ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಅಚ್ಯುತರಾವ್, ರಾಜ್ಯ ಪೊಲೀಸ್ ನಿರ್ದೇಶಕ ಕೆ.ಆರ್.ಶ್ರೀನಿವಾಸನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications