ಇಂಡಿಯಾ ಗ್ಲೌಸಿಗೆ ಮೆತ್ತಿಕೊಂಡ ಮತ್ತೊಂದು ವಿವಾದ
ದುಬೈ, ಫೆ.25 : ಹರ್ಭಜನ್ ಮತ್ತು ಸಿಮಂಡ್ಸ್ ನಡುವಿನ ಜನಾಂಗೀಯ ನಿಂದನೆ ವಿವಾದ ತಣ್ಣಗಾಗಿ ಇಷಾಂತ್ ಮತ್ತು ಸಿಮಂಡ್ಸ್ ನಡುವಿನ ಹೊಸ ತಿಕ್ಕಾಟ ಸಾಕುಸಾಕಪ್ಪಾ ಅಂತನ್ನುವಾಗಲೇ ಮತ್ತೊಂದು ವಿವಾದ ಭಾರತದ 'ಕೈಗವಸಿಗೆ' ಸಿಕ್ಕಿಕೊಂಡಿದೆ.
ಈ ಬಾರಿ ವಿವಾದದ ಕೇಂದ್ರಬಿಂದು ಸ್ವತಃ ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ. ಸಿಡ್ನಿಯಲ್ಲಿ ಫೆ.24ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ಪರಾಭವಗೊಂಡ ಏಕದಿನ ಪಂದ್ಯದಲ್ಲಿ ಧೋನಿ ವಿಕೆಟ್ ಕೀಪಿಂಗ್ ಮಾಡುವಾಗ ಧರಿಸಿದ ಕೈಗವಸುಗಳು ವಿವಾದಕ್ಕೆ ಕಾರಣವಾಗಿವೆ.
ಧೋನಿ ಧರಿಸಿದ ಕೈಗವಸಿನ ಹೆಬ್ಬೆರಳು ಮತ್ತು ತೋರ್ಬೆರಳಿನ ನಡುವಿನ ಜಾಗದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿದ್ದ ಜೋಡಣೆ ಕೋಡ್ ಆಫ್ ಕಂಡಕ್ಟ್ನ ಸಿ1 ನಿಯಮವನ್ನು ಉಲ್ಲಂಘಿಸಿದೆ ಎಂದು ಐಸಿಸಿ ಮ್ಯಾಚ್ ರೆಫರಿ ಜೆಫ್ ಕ್ರೋವ್ ಅಂಪೈರ್ಗಳಾದ ಡೆರಿಲ್ ಹಾರ್ಪರ್ ಮತ್ತು ಟೋನಿ ಹಿಲ್ ಜೊತೆ ಚರ್ಚಿಸಿ ತೀರ್ಪು ನೀಡಿದ್ದರು. ಆ ಕೈಗವಸುಗಳನ್ನು ಮತ್ತೆ ಬಳಸಿದರೆ ದಂಡ ತೆರಬೇಕಾದೀತೆಂದು ಎಚ್ಚರಿಕೆ ನೀಡಿದ್ದರು.
ಆದರೆ, ತಕ್ಷಣ ಆ ಕೈಗವಸುಗಳನ್ನು ಧೋನಿ ಬದಲಿಸಿದ್ದರಿಂದ ಯಾವುದೇ ದಂಡಕ್ಕೊಳಗಾಗದೇ ಪಾರಾಗಿದ್ದಾರೆ.
ಲಿಖಿತ ದೂರು : ರಿಕಿ ಪಾಂಟಿಂಗ್ ನಾಯಕತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ವಿಪರೀತವಾಗಿ ಕೆರಳಿಸುವುದರ ವಿರುದ್ಧ ಮ್ಯಾಚ್ ರೆಫ್ರಿ ಜೆಫ್ ಕ್ರೋವ್ಗೆ ದೂರು ಸಲ್ಲಿಸಿದೆ. ನಿಲ್ಲಿಸದಿದ್ದರೆ ತಕ್ಕ ಕ್ರಮ ಕೈಗೊಳ್ಳಬೇಕಾದೀತು ಎಂದು ಭಾರತದ ಮ್ಯಾನೇಜ್ಮೆಂಟ್ ಎಚ್ಚರಿಕೆ ನೀಡಿದೆ.
ಸಿಡ್ನಿ ಪಂದ್ಯದಲ್ಲಿ ಸಿಮಂಡ್ಸ್ ಔಟಾದನಂತರ ಇಷಾಂತ್ ಬೆರಳು ತೋರಿಸಿದ್ದಕ್ಕೆ ಶೇ.15ರಷ್ಟು ಪಂದ್ಯದ ಹಣ ಕಳೆದುಕೊಂಡಿದ್ದಾರೆ. ಆದರೆ, ಇದನ್ನೆಲ್ಲಾ ಪ್ರಾರಂಭಿಸಿದ್ದು ಸಿಮಂಡ್ಸ್ ಎಂಬ ಮಾತು ಕಾಮೆಂಟರಿ ಬಾಕ್ಸ್ನಿಂದ ಬಂದಿತ್ತು. ಔಟಾದ ನಂತರ ತೆಗಳುತ್ತ ನಡೆದ ಸಿಮಂಡ್ಸ್ ಮಾತ್ರ ಯಾವುದೇ ದಂಡತೆರದೇ ಮತ್ತೊಮ್ಮೆ ಬಚಾವಾಗಿದ್ದಾರೆ.
(ಏಜೆನ್ಸೀಸ್)