ಜನಾಂಗ ನಿಂದನೆ ಆರೋಪದಿಂದ ಮುಕ್ತನಾದ ಭಜ್ಜಿ
ಅಡಿಲೇಡ್, ಜ.29: ಹೊಗೆಯಾಡುತ್ತಿದ್ದ ಹರ್ಭಜನ್ ಸಿಂಗ್ ಮೇಲಿನ ಜನಾಂಗ ನಿಂದನೆಯ ಆರೋಪ ಕರಗಿಹೋಗಿದೆ. ಹರ್ಭಜನ್ ಮೇಲಿನ ಜನಾಂಗ ನಿಂದನೆಯ ಆರೋಪವನ್ನು ತೆರವುಗೊಳಿಸಿರುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ನಿರಂಜನ್ ಶಾ ಮಂಗಳವಾರ ತಿಳಿಸಿದರು.
ಜನಾಂಗ ನಿಂದನೆಯ ಆರೋಪ ಹೊತ್ತಿರುವ ಹರ್ಭಜನ್ಗೆ ಮೂರು ಪಂದ್ಯಗಳ ನ್ನು ಆಡದಂತೆ ಐಸಿಸಿ ನೀತಿ ಸಂಹಿತೆ 3.3 ಲೆವೆಲ್ ಪ್ರಕಾರ ಶಿಕ್ಷೆ ವಿಧಿಸಲಾಗಿತ್ತು. ಹರ್ಭಜನ್ ಮೇಲಿನ ಆರೋಪ ಕುರಿತು ವಿಚಾರಣೆ ಮಾಡಿದ ನ್ಯೂಜಿಲ್ಯಾಂಡ್ನ ನ್ಯಾಯಾಧೀಶ ಜಾನ್ ಹನ್ಸೆನ್ ಐಸಿಸಿ ನೀತಿ ಸಂಹಿತೆ 2.8ಲೆವೆಲ್ ಶಿಕ್ಷೆಯನ್ನು ವಿಧಿಸಿದ್ದಾರೆ. ಇದರ ಪ್ರಕಾರ ಭಜ್ಜಿ ಎರಡು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಹಾಗೂ ಒಂದು ಟೆಸ್ಟ್ ಮ್ಯಾಚನ್ನು ಆಡುವಂತಿಲ್ಲ. ಈ ಹಿಂದೆ ಹರ್ಭಜನ್ ಮೇಲಿನ ವಿಧಿಸಿದ್ದ 3.3ಲೆವೆಲ್ ಆರೋಪವನ್ನು ಕಡಿಮೆಗೊಳಿಸಿ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಐಸಿಸಿಯನ್ನ್ನು ವಿನಂತಿಕೊಂಡಿದ್ದರು.
ಒಟ್ಟಾರೆಯಾಗಿ ಹರ್ಭಜನ್ ಮೇಲಿನ ಆರೋಪದ ಪ್ರಮಾಣವನ್ನು ಕಡಿಮೆಯಾಗಿದೆ. ಪಂದ್ಯದ ಸಂಭಾವನೆಯಲ್ಲಿ ಶೇ.50 ರ ದಂಡ ಪಾವತಿಸುವಂತೆ ಐಸಿಸಿ ತೀರ್ಪು ನೀಡಿದೆ.ಇದು ಮುಗಿದ ಅಧ್ಯಾಯ. ಅಸಭ್ಯವಾಗಿ ನಡೆದುಕೊಂಡಿದ್ದಕ್ಕಷ್ಟೇ ಈ ಶಿಕ್ಷೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಹರ್ಭಜನ್ ಸಿಂಗ್ ಆಸ್ಟ್ರೇಲಿಯಾದ ಸೈಮಂಡ್ಸ್ ವಿರುದ್ಧ ಮಾಡಿರುವರೆನ್ನಲಾದ ಜನಾಂಗ ನಿಂದನೆ ಭೂತಾಕಾರ ಪಡೆಯುವ ಮೊದಲೇ ಹೊಸಕಿ ಹಾಕಲು ಪಾಂಟಿಂಗ್ಗೆ ಅವಕಾಶವಿತ್ತು. ಆದರೆ, ತಾವು ಏನು ಮಾಡಿದರೂ ನಡೆಯುತ್ತದೆ, ಬೇರೆಯವರ ಮಾತನ್ನೇನು ಕೇಳುವುದು ಎಂಬಂತೆ ದುರಹಂಕಾರದಿಂದ ವರ್ತಿಸಿದ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಈಗ ಮೈಯೆಲ್ಲಾ ಪರಚಿಕೊಳ್ಳುವಂತಾಗಿದೆ.
(ದಟ್ಸ್ಕ್ರಿಕೆಟ್ ವಾರ್ತೆ)