ಜ.27ರಂದು ಕಾಂಗ್ರೆಸ್ಗೆ ಪ್ರಕಾಶ್ : ಖರ್ಗೆ
ಗುಲ್ಬರ್ಗ, ಜ.23: ಬೆಂಗಳೂರಿನಲ್ಲಿ ಜ.27ರಂದು ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪ್ರಸ್ತುತ ದೆಹಲಿಯಲ್ಲಿರುವ ಪ್ರಕಾಶ್ ಕೇಂದ್ರ ಸಚಿವರಾದ ಪೃಥ್ವಿರಾಜ್ ಚವ್ಹಾಣ್, ಆಸ್ಕರ್ ಫರ್ನಾಂಡೀಸ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಖರ್ಗೆ ಇಲ್ಲಿ ಆಯೋಜಿಸಲಾಗಿದ್ದ ರಾಜ್ಯ ಯುವ ಕಾಂಗ್ರೆಸ್ ನವಚೈತನ್ಯ ಸಮಾವೇಶದಲ್ಲಿ ಬುಧವಾರ ತಿಳಿಸಿದರು.
ಸಿದ್ದು ಬೆಂಬಲಿಗರಾದ ವೈಜನಾಥ್ ಪಾಟೀಲ್ ಸೇರಿದಂತೆ 8 ಮಂದಿ ಅಧಿಕೃತವಾಗಿ ಕಾಂಗ್ರೆಸ್ ಸೇರಲು ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ ಎಂದೂ ಸುದ್ದಿಗಾರರಿಗೆ ತಿಳಿಸಿದರು.
ಕೇಂದ್ರ ಸಚಿವ ಪೃಥ್ವಿರಾಜ್ ಚವ್ಹಾಣ್ ಜ.25ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಕಾಂಗ್ರೆಸ್ ಮುಖಂಡರೊಡನೆ ಚರ್ಚಿಸಿದ ನಂತರ ನೂತನ ಪದಾಧಿಕಾರಿಗಳ ನೇಮಕ, ಸಿದ್ಧ ರಾಮಯ್ಯ ಅವರಿಗೆ ನೀಡುವ ಸ್ಥಾನಮಾನವನ್ನು ಆಖೈರುಗೊಳಿಸಲಾಗುತ್ತದೆ. ಅಂದು ಎಂ.ಪಿ.ಪ್ರಕಾಶ್ ಮತ್ತು ಅವರ ಬೆಂಬಲಿಗರು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
(ದಟ್ಸ್ಕನ್ನಡ ವಾರ್ತೆ)