ಪ್ರಕಾಶ್ಗೆ ಉನ್ನತ ಸ್ಥಾನಮಾನ : ಯಡಿಯೂರಪ್ಪ ಆಮಿಷ
ನವದೆಹಲಿ, ಡಿ.17 : ಜೆಡಿಎಸ್ ತ್ಯಜಿಸಿರುವ ಎಂ.ಪಿ.ಪ್ರಕಾಶ್ ಯಾವ ಪಕ್ಷ ಸೇರಬೇಕೆಂಬ ಜಿಜ್ಞಾಸೆಯಲ್ಲಿರುವಾಗ ತಮ್ಮ ಪಕ್ಷಕ್ಕೆ ಬಂದರೆ ಉನ್ನತ ಸ್ಥಾನಮಾನ ನೀಡುವುದಾಗಿ ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಾಶ್ಗೆ ಆಮಿಷ ಒಡ್ಡಿದ್ದಾರೆ.
ಪ್ರಸ್ತುತ ಪಕ್ಷದಲ್ಲಿ ಉದ್ಭವವಾಗಿರುವ ಆಂತರಿಕ ಬಿಕ್ಕಟ್ಟನ್ನು ಶಮನ ಮಾಡುವ ಮೂಲ ಉದ್ದೇಶದಿಂದ ನವದೆಹಲಿಯಲ್ಲಿ ಠಿಕಾಣಿ ಹೂಡಿರುವ ಯಡಿಯೂರಪ್ಪ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಕಾಶ್ಗೆ ಉನ್ನತ ಸ್ಥಾನಮಾನ ನೀಡುವ ವಿಷಯವನ್ನು ತಿಳಿಸಿದರು. ಪ್ರಕಾಶ್ ಮತ್ತು ಬೆಂಬಲಿಗರಿಗೆ ಬಿಜೆಪಿ ಸೇರಲು ಮುಕ್ತ ಆಹ್ವಾನವಿತ್ತಿರುವುದಾಗಿ ಯಡಿಯೂರಪ್ಪ ಮೊದಲೇ ಹೇಳಿದ್ದರು.
ಪ್ರಧಾನಿ ಹುದ್ದೆ ಬಿಜೆಪಿಯ ಅಭ್ಯರ್ಥಿಯಾಗಿರುವ ಪಕ್ಷದ ರಾಷ್ಟ್ರೀಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ಅಭಿನಂದಿಸುವ ಉದ್ದೇಶದಿಂದ ದೆಹಲಿಗೆ ಭೇಟಿ ನೀಡಿರುವುದಾಗಿ ಯಡಿಯೂರಪ್ಪ ಹೇಳುತ್ತಿದ್ದರೂ ಕೆಲ ಹಿರಿಯ ನಾಯಕ ಕಾರ್ಯವೈಖರಿ ಕುರಿತಂತೆ ಒಂದು ಪಂಗಡ ವರಿಷ್ಠರಿಗೆ ದೂರು ನೀಡಿರುವುದು ಹೊಸಮಾತೇನಲ್ಲ.
ರಾಜ್ಯಾಧ್ಯಕ್ಷ ಸದಾನಂದಗೌಡ ಮತ್ತು ಯಡಿಯೂರಪ್ಪ ಅವರು ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುತ್ತಿದ್ದಾರೆ ಮತ್ತು ತಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಈಶ್ವರಪ್ಪ, ಜಗದೀಶ್ ಶೆಟ್ಟರ್ ಮೊದಲಾದ ನಾಯಕರು ಅಸಮಾಧಾನಗೊಂಡಿದ್ದರು. ಈಗ ಕಟ್ಟಾ ಸುಬ್ರಮಣ್ಯಂ ಮತ್ತು ಅಶೋಕ್ರೊಡಗೂಡಿ ಯಡಿಯೂರಪ್ಪ ದೆಹಲಿಗೆ ತೆರಳಿದ್ದು ರಾಷ್ಟ್ರೀಯ ನಾಯಕರೊಡನೆ ಮಾತುಕತೆ ನಡೆಸಲಿದ್ದಾರೆ.
ಈಗ ಪಕ್ಷದಲ್ಲಿ ಪ್ರಕಾಶ್ಗೆ ಉನ್ನತ ಸ್ಥಾನಮಾನ ನೀಡುವ ಹೇಳಿಕೆ ನೀಡಿರುವುದರಿಂದ ಕೆಲ ನಾಯಕ ಕಣ್ಣು ಕೆಂಪಾದರೂ ಆಶ್ಚರ್ಯವಿಲ್ಲ ಎಂಬ ಮಾತುಗಳು ಬಿಜೆಪಿ ಪಾಳಯದಿಂದ ಕೇಳಿಬರುತ್ತಿವೆ. ಪ್ರಕಾಶ್ಗೆ ಉನ್ನತ ಸ್ಥಾನ ನೀಡುವುದಾಗಿ ಹೇಳಿರುವ ಯಡಿಯೂರಪ್ಪ ಅವರ ಬೆಂಬಲಿಗರ ಕುರಿತಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಎಚ್.ಕೆ. ಪಾಟೀಲ್ ಆಹ್ವಾನ : ಈ ನಡುವೆ ಪಕ್ಷ ಸೇರುವುದಾದರೆ ಕಾಂಗ್ರೆಸ್ ತುಂಬು ಹೃದಯದಿಂದ ಬರಮಾಡಿಕೊಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ಆಹ್ವಾನವಿತ್ತಿದ್ದಾರೆ. ಬೇರೆ ಪಕ್ಷ ರಚಿಸುವ ಯಾವುದೇ ನಿರ್ಧಾರವಿಲ್ಲ ಸ್ಪಷ್ಟವಾಗಿ ತಿಳಿಸಿರುವ ಪ್ರಕಾಶ್ ತಮ್ಮ ಮೌಲ್ಯಗಳನ್ನು ಗೌರವಿಸುವ ಪಕ್ಷ ಸೇರುವುದಾಗಿ ಹೇಳಿದ್ದರು.
(ದಟ್ಸ್ಕನ್ನಡ
ವಾರ್ತೆ)
ಕಾಂಗ್ರೆಸ್
ಪಕ್ಷದ
ತೆಕ್ಕೆಗೆ
ಮಾಜಿ
ಸಚಿವ
ಎಂ.ಪಿ.ಪ್ರಕಾಶ್?