ಜೀ ಸರಿಗಮದಲ್ಲಿ ಗೆದ್ದ ಸುಪ್ರಿಯಾಗೆ 3ಲಕ್ಷ ರೂ.ಬಹುಮಾನ
ಬೆಂಗಳೂರು, ನವೆಂಬರ್ 26 : ಜೀ ಕನ್ನಡದ ಜನಾನುರಾಗಿ ಕಾರ್ಯಕ್ರಮ ಸರಿಗಮಪ ಅಂತಿಮ ಸ್ಪರ್ಧೆಯಲ್ಲಿ(ಗೃಹಿಣಿಯರಿಗಾಗಿ ನಡೆದ ವಿಶೇಷ ಸ್ಪರ್ಧೆ) ಬೆಂಗಳೂರಿನ ಸುಪ್ರಿಯಾ ರಾಮಕೃಷ್ಣ 3ಲಕ್ಷ ರೂಪಾಯಿಗಳ ಬಹುಮಾನವನ್ನು ಹಾಗೂ ಮಂಗಳೂರಿನ ಜಯಂತಿ ಭಟ್ 1.5ಲಕ್ಷಗಳ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದ ಐವರು ಸ್ಪರ್ಧಿಗಳಲ್ಲಿ ಇವರು ವಿನ್ನರ್ ಮತ್ತು ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಅವರು ಈ ಗಾರ್ನಿಯರ್ ಪ್ರೂಕ್ಟಿಸ್ ಪ್ರಾಯೋಜಿತ ಸಮಾರಂಭದ ಮುಖ್ಯ ಅತಿಥಿಯಾಗಿ ಸರಿಗಮಪ ವಿಜೇತರ ಹೆಸರನ್ನು ಪ್ರಕಟಿಸಿದರು.
ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ಭಾಗವಹಿಸಿ ಕೊನೆಯ ಹಂತದಲ್ಲಿ ಆರೋಗ್ಯ ಕೈಕೊಟ್ಟಿದ್ದರಿಂದ ಸರಿಯಾಗಿ ಹಾಡಲಾಗದೇ ಸ್ಪರ್ಧೆಯಿಂದ ಹೊರಗುಳಿದಿದ್ದೆ. ಆದರೆ ಈ ಬಾರಿ ಪ್ರಶಸ್ತಿ ತನ್ನದಾಗಿಸಲು ಯಶಸ್ವಿಯಾಗಿದೆ ಎಂಬ ಸಂತೋಷವನ್ನು ಪ್ರಶಸ್ತಿ ವಿಜೇತೆ ಸುಪ್ರಿಯಾ ರಾಮಕೃಷ್ಣ ವ್ಯಕ್ತಪಡಿಸಿದರು.
"ಅಡುಗೆಯಿಂದ ಹಿಡಿದು ಪ್ರತಿಯೊಂದು ವಿಷಯಗಳನ್ನು ನಾವೆಲ್ಲಾ ಸ್ಪರ್ಧಿಗಳು ಚರ್ಚಿಸುತ್ತಿದ್ದೆವು. ಉತ್ತಮ ಸ್ನೇಹಿತರನ್ನು ಪಡೆದೆ. ಈ ಟಿವಿ ಮತ್ತು ಚಂದನದ ಸಂಗೀತ ಸ್ಪರ್ದೆಯಲ್ಲೂ ಭಾಗವಹಿಸಿದ್ದರೂ ಜೀ ಟಿವಿ ಸರಿಗಮಪ ಅನುಭವ ಅದ್ಬುತವಾಗಿತ್ತು ಎಂದು ರನ್ನರ್ ಅಪ್ ಪ್ರಶಸ್ತಿ ಪಡೆದ ಮಂಗಳೂರಿನ ಗಾಯಕಿ ಜಯಂತಿ ತಮ್ಮ ಹರ್ಷ ವ್ಯಕ್ತ ಪಡಿಸಿದರು.ಅಂತಿಮ ಸುತ್ತಿನಲ್ಲಿದ್ದ ಉಳಿದ ಗೃಹಿಣಿಯರಿಗೆ ವಿಟ್ಟಲ್ಸ್ ಟ್ರೆಂಡಿ ಫ್ಯಾಮಿಲಿ ಸ್ಟೋರ್ನವರು ಉಡುಗೊರೆಗಳನ್ನು ನೀಡಿ ಗೌರವಿಸಿದರು. ಹಿಮಾಲಯ ಡ್ರಗ್ ಕಂಪೆನಿಯಿಂದ ಅಂತಿಮ ಹಂತಕ್ಕೆ ಆಯ್ಕೆಯಾದವರಿಗೆ ಉಡುಗೊರೆಯನ್ನು ನೀಡಲಾಯಿತು.
'ಪ್ರೇಕ್ಷಕರಲ್ಲಿ ಸಂಗೀತದ ಆಸಕ್ತಿ ಬತ್ತಿಲ್ಲ ಎಂಬುದಕ್ಕೆ ಸರಿಗಮಪ ಯಶಸ್ಸೇ ಸಾಕ್ಷಿ. ಗೃಹಿಣಿಯರು ಈ ಸ್ಪರ್ಧೆಯಲ್ಲಿ ನಿರೀಕ್ಷೆಗಿಂತಲೂ ಉತ್ತಮವಾಗಿ ಸ್ಪಂದಿಸಿದ್ದಾರೆ. ಜೀ ಕನ್ನಡವು ಇನ್ನು ಮುಂದೆಯೂ ತನ್ನ ಕಾರ್ಯಕ್ರಮಗಳಲ್ಲಿ ಸಂಗೀತ ಕ್ಷೇತ್ರಕ್ಕೆ ವಿಶೇಷ ಮಹತ್ವ ನೀಡಲಿದೆ ಎಂದು ಜೀ ಕನ್ನಡ ವಾಹಿನಿಯ ವ್ಯವಹಾರಿಕ ಮುಖ್ಯಸ್ಥ ಅನುಪ್ ಚಂದ್ರಶೇಖರ್ ತಿಳಿಸಿದ್ದಾರೆ.
ಸಮಾರಂಭಕ್ಕೆ ಅತಿಥಿಗಳಾಗಿ ರಾಜೇಶ್ ರಾಮನಾಥ್, ಬಿ.ಜಯಶ್ರೀ, ಬಿ.ಕೆ ಸುಮಿತ್ರಾ, ಮನೋ ಮೂರ್ತಿ, ರಾಜೇಶ್ ಕೃಷ್ಣನ್, ಅಭಿಮಾನ್, ರಾಜು ಅನಂತಸ್ವಾಮಿ, ಸಂಗೀತಾ ಕಟ್ಟಿ, ಗಿರಿಜಾ ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications