ವರ್ಮಾ,ಶ್ರೀಧರ್ ಮತ್ತು ಜಯಶ್ರೀ ಆ ದಿನಗಳಿಗೆ ಜಾರಿದರು!
ಬೆಂಗಳೂರು, ನ.26 : ಈ ಕಾರ್ಯಕ್ರಮದಲ್ಲಿ ವರ್ಮಾ, ಶ್ರೀಧರ್, ಜಯಶ್ರೀ, ಜಾನ್ ಪೆರಮಾಳ್ ಮನಬಿಚ್ಚಿ ಮಾತನಾಡಿದರು. ಎಸ್ಸೆಲ್ ಕರ್ನಾಟಕ ಶ್ರೇಷ್ಠ ಕಲಾ ಮತ್ತು ಸಂಸ್ಕೃತಿ ಪ್ರಶಸ್ತಿಯನ್ನು ವರ್ಣಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮಾ ಅವರಿಗೆ ನೀಡಿ ಸನ್ಮಾನಿಸಲಾಯಿತು. ಗಣ್ಯರನ್ನೊಳಗೊಂಡ ಸಮಿತಿಯು ಆಯ್ಕೆ ಮಾಡಿದ ಐವರಲ್ಲಿ ಬಿ.ಕೆ.ಎಸ್.ವರ್ಮಾ ಅವರನ್ನು ಕರ್ನಾಟಕದ ಜನತೆ ಎಸ್ಸೆಮ್ಮೆಸ್ ಮತ್ತು ದೂರವಾಣಿ ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಿದೆ.
ಎಸ್ಸೆಲ್ ಕರ್ನಾಟಕ ಪ್ರಶಸ್ತಿಗೆ ಬಿ.ಜಯಶ್ರೀ (ರಂಗ ಕಲಾವಿದೆ, ಗಾಯಕಿ), ಟಿ.ಸಿ.ಸವಿತಾ (ಜನಪದ ನೃತ್ಯಗಾರ್ತಿ), ಶ್ರೀಧರ ಮತ್ತು ಅನುರಾಧಾ (ಭರತನಾಟ್ಯ ಕಲಾವಿದರು) ಮತ್ತು ಶುಭೇಂದ್ರ ರಾವ್ (ಸಿತಾರ್ ವಾದಕ) ಇವರು ಆಯ್ಕೆಯಾದ ಇತರರಾಗಿದ್ದಾರೆ. ಜೀವಮಾನದ ಸಾಧನೆಗಾಗಿ ಡಾ.ಏಣಗಿ ಬಾಳಪ್ಪಾ (ಖ್ಯಾತ ರಂಗ ಕಲಾವಿದರು), ವಿಶೇಷ ಸಾಧನೆಗಾಗಿ ಜಾನ್ ಪೆರುಮಾಳ್(ಶಿಲ್ಪಿ), ವಿಕ್ಟರ್ ಹಾರಾ (ಶಿಲ್ಪಿ) ಮತ್ತು ಕೀರ್ತಿ ರಾಮ್ ಗೋಪಾಲ್ (ಭರತ ನಾಟ್ಯ ಕಲಾವಿದೆ) ಅವರನ್ನು ಸನ್ಮಾನಿಸಲಾಯಿತು.
ವರ್ಮ ಅವರ ಕೈಯಲ್ಲಿ ಕುಂಚ ಕುಣಿಯುತ್ತದೆ..
ಬಿ.ಕೆ.ಎಸ್.ವರ್ಮಾ ಅವರು ಕಲೆಯನ್ನೇ ತಮ್ಮ ಜೀವನವನ್ನಾಗಿಸಿಕೊಂಡವರು. ರಾಜಾ ರವಿವರ್ಮ ಅವರ ವರ್ಣಚಿತ್ರಗಳಿಂದ ಪ್ರಭಾವಿತರಾದ ಬಿ.ಕೆ.ಶ್ರೀನಿವಾಸ್ ತಮ್ಮ ಹೆಸರಿನಲ್ಲಿ ವರ್ಮಾ ಎಂಬುದನ್ನು ಸೇರಿಸಿಕೊಂಡರು. ಕಲಾ ಪ್ರಕಾರಗಳಲ್ಲಿ ವಿಸ್ಮಯ ಮೂಡಿಸುವಂತಹ ಕಾವ್ಯಚಿತ್ರ, ಚಿತ್ರಾವಧಾನ, ಗೀತಕುಂಚ, ಕಾವ್ಯಚಿತ್ರ-ಯಕ್ಷನೃತ್ಯ ಮುಂತಾದ ಪ್ರದರ್ಶನಗಳು ಜನಪ್ರೀಯತೆಗಳಿಸಿವೆ. ಜಗತ್ತಿನ ಹಲವಾರು ಕಡೆ ಒಟ್ಟಾರೆ ಸುಮಾರು 3000ಏಕವ್ಯಕ್ತಿ ಪ್ರದರ್ಶನವನ್ನು ಇವರು ನೀಡಿದ್ದಾರೆ.
'ಚಿತ್ರವೊಂದನ್ನು ನೋಡಿ ಕುಂಚ ತನ್ನಷ್ಟಕ್ಕೆ ಜಂಭ ಕೊಚ್ಚಿಕೊಳ್ಳುತ್ತಿರುತ್ತದೆ. ಆಗ ಬೆರಳು ಕುಂಚವನ್ನು ನಾನು ಸರಿಯಾದ ಹಿಡಿದರಿಂದಲೇ ಇದು ಸಾಧ್ಯವಾಯಿತು ಎನ್ನುತ್ತೆ. ನರಗಳು ತಮ್ಮ ಚಲನೆಯಿಲ್ಲದೆ ಇದು ಸಾಧ್ಯವಿಲ್ಲ ಎನ್ನುತ್ತವೆ. ಮೆದುಳು ತನ್ನ ಬುದ್ದಿವಂತಿಕೆಯಿಂದ ಈ ಅದ್ಬುತ ಚಿತ್ರ ಬಿಡಿಸಲು ಸಾಧ್ಯವಾಯಿತು ಎನ್ನುತ್ತದೆ. ಸ್ಪೇಸ್ ರಿಮೋಟ್ ತಮ್ಮಿಂದ ಇದನ್ನು ಪ್ರಸಾರಮಾಡಲು ಸಾಧ್ಯವಾಯಿತು ಅನ್ನುತ್ತದೆ. ಆಗ ಗಾಡಿ ಮತ್ತು ಬಾಡಿ ಒಂದೇ ಎನ್ನಿಸುತ್ತದೆ. ಕಲಾವಿದರಿಗೆ ಜನರೇ ಜನರೇಟರ್ ಎಂದು ಪ್ರಶಸ್ತಿ ಸ್ವೀಕರಿಸಿ ಬಿ.ಕೆ.ಎಸ್.ವರ್ಮಾ ತಿಳಿಸಿದರು.
ರಂಗಭೂಮಿಗೆ ಶರಣು
ಜೀವಮಾನ ಶ್ರೇಷ್ಠ ಸಾಧನೆಗಾಗಿನ ಪ್ರಶಸ್ತಿ ಸ್ವೀಕರಿಸಿದ ನಾಡೋಜ ಡಾ. ಏಣಗಿ ಬಾಳಪ್ಪ ಮಾತನಾಡುತ್ತ, ನಾನು ಎರಡನೇ ತರಗತಿ ತನಕ ಕಲಿತರೂ ರಂಗಭೂಮಿ ನನಗೆ, ಶಾಲಾ ಶಿಕ್ಷಣವಲ್ಲದೇ ಎಲ್ಲವನ್ನೂ ಕಲಿಸಿದೆ ಎಂದರು.
ಸರ್ವರ ಕಣ್ಮಣಿ
ರಂಗ ಕಲಾವಿದೆ, ಗಾಯಕಿ ಬಿ.ಜಯಶ್ರೀ ಪ್ರಶಸ್ತಿ ಸ್ವೀಕರಿಸುತ್ತಾ, ಪಿ ಕಾಳಿಂಗರಾವ್, ಕಾರಂತ ಹಾಗೂ ಗುಬ್ಬಿ ವೀರಣ್ಣರನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಜೀ ಕನ್ನಡ ಬರಿಯ ಕನ್ನಡಿಗರ ಕಣ್ಮಣಿಯಲ್ಲ. ಅದು ಸರ್ವರ ಕಣ್ಮಣಿ ಎಂದು ಅಭಿಪ್ರಾಯಪಟ್ಟರು.
ಶ್ರೀಧರ್ ಕಷ್ಟದ ದಿನಗಳು
ನಟ, ಭರತನಾಟ್ಯ ಪಟು ಶ್ರೀಧರ್ ದಂಪತಿ ಪರವಾಗಿ ಮಾತನಾಡಿದ ಶ್ರೀಧರ್, ತಮ್ಮ ನಾಟ್ಯದ ದಿನಗಳನ್ನು ನೆನಪಿಸುತ್ತಾ, ಮೂರು ವರ್ಷದ ಹುಡುಗನಾಗಿದ್ದಾಗಲೇ ಯಾವುದೇ ಹಾಡು ಕೇಳಿದರೂ ಕುಣಿಯುತ್ತಿದ್ದೆ. ರವೀಂದ್ರ ಕಲಾಭವದಲ್ಲಿ ನ್ಯತ್ಯ ಕಾರ್ಯಕ್ರಮಗಳನ್ನು ನೋಡಲಿಕ್ಕೆ ಹೋದಂತಹ ದಿನಗಳಲ್ಲಿ ಕಲಾಭವನದಿಂದ ಹನುಮಂತನಗರದವರೆಗೆ ಬಸ್ಸಿನಲ್ಲಿ ಹೋಗದೆ ನಡೆದೇ ಹೋಗುತ್ತಿದ್ದೆ. ರಸ್ತೆಯಲ್ಲಿ ಯಾರೂ ಇಲ್ಲವಾದಾಗ ನಾನು ನೋಡಿದ ನಾಟ್ಯವನ್ನು ಮಾಡಿ ಮೈಮರೆಯುತ್ತಿದ್ದೆ ಎಂದರು.
ಕಳ್ಳ ಕಲಾವಿದನಾದದ್ದು..
ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗಾಗಿ ಗೌರವಿಸಲ್ಪಟ್ಟ ಜಾನ್ ಪೆರುಮಾಳ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಡ್ರಗ್ಸ್ ಮಾರಾಟ ಮಾಡಿ, ಕಳ್ಳತನ ಮಾಡಿ ಜೀವನ ಸಾಗಿಸುತ್ತಿದ್ದೆ. ಅಪ್ಪ ಅಮ್ಮ ಅದೆಷ್ಟು ಬುದ್ದಿಮಾತು ಹೇಳಿದ್ದರೂ ಕೇಳುತ್ತಿರಲಿಲ್ಲ. ಆದರೆ ಜಾನಿಯವರ ಕಣ್ಣಿಗೆ ಬಿದ್ದಾಕ್ಷಣ ನನ್ನ ಜೀವನವೇ ಬದಲಾಗಿ ಹೋಯಿತು. ಇಂದು ನಾನು ಉತ್ತಮ ಡ್ಯಾನ್ಸರ್, ಚಿತ್ರಕಲೆಗಾರ, ನಾಟಕಗಾರ, ಶಿಲ್ಪಿ ಆಗಬೇಕಾದರೆ ಜಾನಿನೇ ಕಾರಣ ಎಂದರು.
ಮನಮುಟ್ಟಿದರು ವಿಕ್ಟರ್ ಹಾರಾ
ನಾನೊಬ್ಬ ಅನಾಥನೂ, ಅಮ್ಮನ ಸುಖವನ್ನೂ ಕಂಡೇ ಇಲ್ಲ, ಅಪ್ಪನ ಸುಖವನ್ನೂ ಕಂಡೇ ಇಲ್ಲ, ನಿಮ್ಮ ಹಾಗೆ ನಾನು ಬಾಳಬೇಕು. ನಾನು ಯಾರಿಗೆ ನನ್ನ ಪ್ರೀತಿ ಕೊಡಲಾರೆನು. ಓದುವ ಪುಸ್ತಕವನ್ನು ನಾ ಪ್ರೀತಿಸುವೆನು. ನಾನೊಬ್ಬ ಅನಾಥನು, ಈ ಅನಾಥನನ್ನು ನೀವು ಮರೆಯಬೇಡಿರಿ ಎಂದು ತಮ್ಮದೇ ಕವನವನ್ನು ಹಾಡಿದ್ದು ಇನ್ನೊಬ್ಬ ವಿಶೇಷ ಸಾಧನೆಗಾಗಿ ಗೌರವಿಸಲ್ಪಟ್ಟ ಯುವಕ ವಿಕ್ಟರ್ ಹಾರಾ.
ಕರ್ನಾಟಕವು ಕಲಾಪ್ರಪಂಚಕ್ಕೆ ಸ್ಪೂರ್ತಿಯ ವೇದಿಕೆ ಎಂದು ಹೆಸರಾಗಿದೆ. ಕರ್ನಾಟಕದಲ್ಲಿಯ ವೈವಿಧ್ಯಮಯ ಸಂಸ್ಕೃತಿಯು ರಾಜ್ಯವನ್ನು ವೈಶಿಷ್ಟ್ಯ ಪೂರ್ಣವನ್ನಾಗಿಸಿದೆ. ಕರ್ನಾಟಕದಲ್ಲಿಯ ಈ ವೈವಿದ್ಯಪೂರ್ಣ ಸಂಸ್ಕೃತಿಯು ಹಲವಾರು ನೃತ್ಯ, ಸಂಗೀತ, ರಂಗಕಲಾವಿದರು ಹಾಗೂ ವರ್ಣ ಕಲಾವಿದರನ್ನು ಹುಟ್ಟುಹಾಕಿದೆ. ಈ ಪ್ರಶಸ್ತಿಯು ಕರ್ನಾಟಕದ ಕಲೆ ಮತ್ತು ಸಂಸ್ಕೃತಿಗೆ ಉತ್ತಮ ಕೊಡುಗೆ ನೀಡಿದವರನ್ನು ಗೌರವಿಸುವುದಾಗಿದೆ ಎಂದು ಎಸ್ಸೆಲ್ ಗ್ರೂಪ್ ಹಾಗೂ ಜೀ ನೆಟ್ನರ್ಕನ ಸಾರ್ವಜನಿಕ ವ್ಯವಹಾರಗಳ ಉಪಾಧ್ಯಕ್ಷರಾದ ಗೌತಮ್ ಮಾಚಯ್ಯ ಹೇಳಿದರು.
ಆಕರ್ಷಕ ಕಾರ್ಯಕ್ರಮ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮೂಡಿಬಂದಿತ್ತು ಟಿ.ಸಿ.ಸವಿತಾರವರ ಪೂಜಾ ನೃತ್ಯ. ಗಾಯಕಿ ಬಿ.ಜಯಶ್ರೀರವರ ತಂಡ ಈ ಯಮ್ಮನೊಡೇ ನಿಂತ ಭಂಗಿ... ಎಂಬ ಹಾಡು ಹಾಡುತ್ತಿದ್ದರೆ ಬಿ.ಕೆ.ಎಸ್ ವರ್ಮಾ ಅವರು ಆಕರ್ಷಕ ಚಿತ್ರವೊಂದನ್ನು ರಚಿಸಿದರು.
ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದಲ್ಲಿದ್ದ ಆಯ್ಕೆ ಸಮಿತಿಯಲ್ಲಿ ಅಲೆನ್ ಮೆಂಡೊನ್ಸಾ (ಸೀನಿಯರ್ ಜರ್ನಲಿಸ್ಟ್ ಮತ್ತು ರೇನ್ ಟ್ರೀ ಮಿಡಿಯಾ Pvಣ. ಐಣಜ ನ ನಿರ್ದೇಶಕ ) ಜಾನ್ ದೇವರಾಜ್ (ಶಿಲ್ಪಿ, ಕಲಾವಿದ, ಸಂಗೀತಗಾರ, ರಂಗ ಕಲಾವಿದ), ಮಾಸ್ಟರ್ ಹಿರಣ್ಣಯ್ಯ (ರಂಗ ಕಲಾವಿದ) ಡಾ.ಮೋಹನ್ ಆಳ್ವ ( ಎಸ್ಸೆಲ್ ಕರ್ನಾಟಕ ಶ್ರೇಷ್ಠ ವೈದ್ಯಕೀಯ ಸೇವಾ ಪ್ರಶಸ್ತಿ ವಿಜೇತ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ), ಮುದ್ದು ಕೃಷ್ಣ ( ಮಾಜಿ ನಿರ್ದೇಶಕ, ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ), ರಶ್ಮಿ ಹೆಗ್ಡೆ (ನೃತ್ಯ ನಿರ್ದೇಶಕಿ, ಹಾಗೂ ಶಂಕರ ಫೌಂಡೇಶನ್ನ ನಿರ್ದೇಶಕಿ) ಶಿವಮೊಗ್ಗ ಸುಬ್ಬಣ್ಣ (ಗಾಯಕ), ಕೆ.ವಿ.ಆರ್.ಟ್ಯಾಗೋರ್ (ಕಮಿಷನರ್, ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ) , ತಾರಾ (ಸಿನೆಮಾ ಕಲಾವಿದೆ) ಇವರು ಸದಸ್ಯರಾಗಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications