ನೀರಿನಂತೆ ಲಂಚ ಕುಡಿದ ಅಧಿಕಾರಿ ಲೋಕಾಯುಕ್ತರ ಬಲೆಗೆ
ಬೆಂಗಳೂರು, ನ.24 : ಈ ನಗರದ 'ತಿಮಿಂಗಲ'ಕ್ಕೆ ಲಂಚ ತಿನ್ನುವುದು ನೀರು ಕುಡಿದಷ್ಟೇ ಸುಲಭ. ತನ್ನ ವೇತನದಳತೆಗೆ ಮೀರಿ 20 ಕೋಟಿಗೂ ಹೆಚ್ಚಿನ ಆಸ್ತಿಯನ್ನು ಜಮಾಯಿಸಿದ್ದ ಬಿಡಬ್ಲ್ಯೂಎಸ್ಎಸ್ಬಿ 'ಭ್ರಷ್ಟ' ಅಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದು ಈಗ ನೀರಿನಿಂದ ಆಚೆಗೆ ಬಿದ್ದಿದ್ದಾರೆ.
ಬುಟ್ಟಿಗ್ಬಿದ್ಮೀನಂಗೆ ಒದ್ದಾಡುತ್ತಿರುವ ಈ 'ತಿಮಿಂಗಲ'ದ ಹೆಸರು ಶ್ರೀನಿವಾಸ ರೆಡ್ಡಿ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ವಾಹಕ ನಿರ್ದೇಶಕ.
ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ನೇತೃತ್ವದ ತಂಡ ಸದಾಶಿವನಗರದಲ್ಲಿದ್ದ ಭವ್ಯ ಬಂಗಲೆ ಮತ್ತು ಕಾವೇರಿ ಭವನದಲ್ಲಿದ್ದ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ಬೆಳಿಗ್ಗೆಯೇ ಪ್ರಾರಂಭವಾದ ದಾಳಿ ಇನ್ನೂ ಮುಂದುವರಿಯುತ್ತಲೇ ಇದೆಯೆಂದರೆ ಕಬಳಿಸಿದ ಆಸ್ತಿಪಾಸ್ತಿಯನ್ನು ನೀವೇ ಅಂದಾಜು ಮಾಡಿ.
ಒಂದೂವರೆ ಕೋಟಿಗೂ ಹೆಚ್ಚಿನ ನಗದು, ಹದಿನೆಂಟು ಎಕರೆಗೆ ಸಂಬಂಧಿಸಿದ ಕಾಗದಪತ್ರ, ಅನೇಕ ಬ್ಯಾಂಕ್ಗಳ ಪಾಸ್ಬುಕ್ಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ.
ತನ್ನ ಹೆಸರಲ್ಲಿ ಮಾತ್ರವಲ್ಲ ಹತ್ತಿರದ ಸಂಬಂಧಿಕರ ಹೆಸರಿನಲ್ಲಿಯೂ ನಗರದಲ್ಲಿ ಕೊಳ್ಳಲಾದ ಮನೆ, ವಸತಿಸಮುಚ್ಚಯ, ನಿವೇಶನದ ವಿವರಗಳನ್ನು ನ್ಯಾ.ಸಂತೋಷ್ ಹೆಗಡೆ ನೀಡಿದರು.
ರೆಡ್ಡಿ ಮನೆ ಮೇಲೆ ನಡೆದ ರೇಡ್ನಲ್ಲಿ ಆನೇಕಲ್ ತಾಲೂಕಿನಲ್ಲಿ ಕೃಷಿ ಜಮೀನುಗಳನ್ನು ಕೊಂಡ ಬಗ್ಗೆಯೂ ಕಾಗದಪತ್ರಗಳು ಸಿಕ್ಕಿವೆ.
(ಯುಎನ್ಐ)