ಜನ ತಿರುಗಿಬಿದ್ದ ಪರಿಣಾಮ ಸೂಪರ್ ಮಾರ್ಕೆಟ್ ಗೆ ಬೀಗ!
ಬಿಗ್ ಬಜಾರ್ ಮತ್ತು ಶಾಪಿಂಗ್ ಮಾಲ್ ಗಳ ಭರಾಟೆ ನಗರಗಳಲ್ಲಿ ಹೆಚ್ಚುತ್ತಿದೆ. ಬೇಕಾದದ್ದು, ಬೇಡವಾದದ್ದು ಎಲ್ಲವೂ ಇಲ್ಲುಂಟು. ಕೊಳ್ಳುಬಾಕ ಸಂಸ್ಕೃತಿಗೆ ಇವು ರಾಜಮಾರ್ಗಗಳು. ಸಣ್ಣ ಮಟ್ಟದ ಪ್ರತಿರೋಧದ ಮಧ್ಯೆಯೂ ಇವು ಕಾರ್ಯ ನಿರ್ವಹಿಸುತ್ತಿವೆ. ಮೊನ್ನೆ ಪಶ್ಚಿಮ ಬಂಗಾಲದಲ್ಲಿ ರಿಲಿಯನ್ಸ್ ಸಂಸ್ಥೆಗೆ ಸೇರಿದ ಸೂಪರ್ ಮಾರ್ಕೆಟ್ ಮಳಿಗೆಗೆ ಬೀಗ ಬಿದ್ದಿದೆ.. ಜನ ತಿರುಗಿಬಿದ್ದಿದ್ದಾರೆ. ಬಿಬಿಸಿಯಲ್ಲಿ ಪ್ರಕಟವಾಗಿದ್ದ ಈ ಸುದ್ದಿಯನ್ನು, ಎನ್. ಅಂಜನ್ ಕುಮಾರ್ ಎಂಬ ಓದುಗರು ಇಲ್ಲಿ ಹಂಚಿಕೊಂಡಿದ್ದಾರೆ.
ಪಾಶ್ಚಾತ್ಯ ಶೈಲಿಯಲ್ಲಿ ಸರಕನ್ನು ಚಿಲ್ಲರೆ ಮಾರಾಟ ಮಾಡಲು ಹೊರಟ ರಿಲಿಯನ್ಸ್ ಫ್ರೆಶ್ ಸೂಪರ್ ಮಾರ್ಕೆಟ್ ಜಾಲವನ್ನು, ಕಮ್ಯೂನಿಸ್ಟ್ ಆಡಳಿತದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಮುಚ್ಚಲಾಗಿದೆ.
ಕಳೆದೆರಡು ವಾರಗಳಿಂದ ಎಡಪಂಥೀಯ ಪಕ್ಷಗಳ ಬೆಂಬಲಿಗರಿಂದ ದಾಳಿಗೊಳಗಾದ ಬಳಿಕ ಸಂಸ್ಥೆಯ ಆಸ್ತಿ ಮತ್ತು ಕೆಲಸಗಾರರ ಸುರಕ್ಷತೆಯ ದೃಷ್ಟಿಯಿಂದ ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಅಧಿಕಾರ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರದ ಪ್ರಮುಖ ಪಕ್ಷವಾದ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್) ಈ ವ್ಯವಹಾರಕ್ಕೆ ಅನುಮತಿ ನೀಡಿದೆ. ಆದರೆ ಮಿತ್ರ ಪಕ್ಷವಾದ ಫಾರ್ವರ್ಡ್ ಬ್ಲಾಕ್ ವಿರೋಧ ಪಕ್ಷಗಳೊಂದಿಗೆ ಸೇರಿಕೊಂಡು ಇದನ್ನು ಪ್ರಬಲವಾಗಿ ವಿರೋಧಿಸಿದೆ.
ಈ ದಾಳಿಗಳಿಂದ ತಲ್ಲಣಿಸಿದ ರಿಲಿಯನ್ಸ್ ರೀಟೇಲ್ ತನ್ನ ಮಳಿಗೆಗಳನ್ನು ಮುಚ್ಚಿ ವಿಸ್ತರಣಾ ಯೋಜನೆಗಳನ್ನು ಸದ್ಯಕ್ಕೆ ಕೈ ಬಿಟ್ಟಿದೆ. ರಿಲಿಯನ್ಸ್ ನಿರ್ಧಾರವನ್ನು ಫಾರ್ವರ್ಡ್ ಬ್ಲಾಕ್ ಮತ್ತು ವಿರೋಧ ಪಕ್ಷವಾದ ತೃಣಮೂಲ ಕಾಂಗ್ರೆಸ್ ಸ್ವಾಗತಿಸಿವೆ.
ಪಶ್ಚಿಮ ಬಂಗಾಳ ಸರ್ಕಾರ ಈ ಅಂಗಡಿಗಳ ಮೇಲೆ ದಾಳಿ ನಡೆಸಿದವರ ಮೇಲೆ, ಅವರು ಯಾವುದೇ ಪಕ್ಷದವರಾಗಿರಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಈ ಮಳಿಗೆಗಳಿಗೆ ಸೂಕ್ತ ರಕ್ಷಣೆ ಒದಗಿಸುವ ಭರವಸೆ ನೀಡಿದೆ.
ಕಳೆದ ವಾರ ಉತ್ತರ ಪ್ರದೇಶದಲ್ಲಿ ಸ್ಥಳೀಯ ವ್ಯಾಪಾರಿಗಳಿಂದ ರಿಲಿಯನ್ಸ್ ಮಳಿಗೆಗಳು ದಾಳಿಗೊಳಗಾದ ನಂತರ, ಆ ರಾಜ್ಯದ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ 30 ಮಳಿಗೆಗಳನ್ನು ಮುಚ್ಚಲು ಅದೇಶಿಸಿತು.
ತಾಜಾ ಹಣ್ಣು, ಹೂ, ತರಕಾರಿಗಳನ್ನು ಮಾರುವ ರಿಲಿಯನ್ಸ್ ಸ್ಟೋರ್ ಗಳು ಗ್ರಾಹಕರಲ್ಲಿ ಸ್ವಲ್ಪಮಟ್ಟಿಗೆ ಜನಪ್ರಿಯವಾಗಿದ್ದರೆ, ಸಣ್ಣ ವ್ಯಾಪಾರಿಗಳು ಮತ್ತು ದಲ್ಲಾಳಿಗಳಿಗೆ ತಮ್ಮ ಅನ್ನಕ್ಕೆಲ್ಲಿ ಕಲ್ಲು ಬೀಳುವುದೋ ಎಂಬ ಆತಂಕವನ್ನು ಸೃಷ್ಟಿಸಿವೆ.












Click it and Unblock the Notifications