ರಾಜ್ಯ ಜೆಡಿಎಸ್ ಚುಕ್ಕಾಣಿ ಹಿಡಿದ ಮೆರಾಜುದ್ದೀನ್ ಪಟೇಲ್
ರಾಜ್ಯ ದ ಜಾತ್ಯಾತೀತ ಜನತಾದಳದ ಅಧ್ಯಕ್ಷ ಸ್ಥಾನಕ್ಕೆ ಮೆರಾಜುದ್ದೀನ್ ಪಟೇಲ್ ಅವರನ್ನು ಆರಿಸಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡರವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗೃಹ ಸಚಿವ ಎಂ.ಪಿ. ಪ್ರಕಾಶ್ ರವರು ತಮ್ಮನ್ನು ರಾಜ್ಯ ಜೆಡಿಎಸ್ ಅಧ್ಯಕ್ಷ ಪದವಿಯಿಂದ ಮುಕ್ತಗೊಳಿಸಿ ಎಂದು ಮಾಡಿಕೊಂಡ ಮನವಿಯ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮೆರಾಜುದ್ದೀನ್ ಪಟೇಲ್ರವರು ಸೋಮವಾರ ಮಧ್ಯಾಹ್ನ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ದೇವೇಗೌಡ ಹೇಳಿದರು.
***
ತಮಿಳುನಾಡಿನಲ್ಲಿ ರಂಗೇರಿದ ಹೊಸ ರಾಜಕೀಯ ಪಕ್ಷ
ತಮಿಳು ಚಿತ್ರ ನಟ ಆರ್. ಶರತ್ ಕುಮಾರ್ ಹೊಸ ಪಕ್ಷವನ್ನು ಸ್ಥಾಪಿಸುವ ಮೂಲಕ ಅಲ್ಲಿನ ರಾಜಕೀಯದಲ್ಲಿ ರಂಗೇರಿಸಿದ್ದಾರೆ. ತಮಿಳು ಚಿತ್ರರಂಗಕ್ಕೂ ಸಿನಿಮಾರಂಗಕ್ಕೂ ಬಿಡಿಸಲಾಗದ ನಂಟು.
ಎಂಜಿಆರ್, ಜಯಲಲಿತ, ಕರುಣಾನಿಧಿ, ವಿಜಯಕಾಂತ್ ಹೀಗೆ ಸಿನಿಮಾದವರ ಪಟ್ಟಿಯೆ ಇದೆ. ಶನಿವಾರ ಶರತ್ತ ಹೊಸ ಪಕ್ಷ ‘ಅಖಿಲ ಭಾರತೀಯ ಸಮತ್ವ ಮಕ್ಕಳ್ ಕಚ್ಚಿ ಪಕ್ಷ’ (ಎಐಎಸ್ಎಂಕೆ) ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂತು.
ಈ ಮುಂಚೆ ಕರುಣಾನಿಧಿಯವರ ಡಿಎಂಕೆ ಪಕ್ಷದಲ್ಲಿದ್ದ ಶರತ್ ಕುಮಾರ್ ಕಾರಣಾಂತರಗಳಿಂದ ಅದನ್ನು ತೊರೆದರು. ನಂತರ ಪತ್ನಿ ರಾಧಿಕಾ ಜೊತೆ ಅಣ್ಣಾ ಡಿಎಂಕೆ ಪಕ್ಷ ಸೇರಿ ಅಲ್ಲಿಂದಲೂ ಹೊರಬಂದು ಈಗ ಹೊಸ ಪಕ್ಷ ಕಟ್ಟಿದ್ದಾರೆ.