ಮೀಡಿಯಾ ಮಸಾಲ : ಸಕತ್ ಹಾಟ್, ಸಕತ್ ಸ್ಪೈಸಿ!
- ಪುಷ್ಪಪಾದ
***
ವಿಕ್ರಾಂತ ಕರ್ನಾಟಕಆರಂಭಗೊಂಡಾಗ, ಅದು ವಿಶ್ರಾಂತ ಕರ್ನಾಟಕವಾಗದಿದ್ದರೆ ಸಾಕು ಎಂದು ಪತ್ರಕರ್ತ ರವಿ ಬೆಳಗೆರೆ, ಆಹ್ವಾನ ಪತ್ರಿಕೆ ಸ್ವೀಕರಿಸಿ ಹಾರೈಸಿದ್ದರಂತೆ!
ಅಮೆರಿಕಾದಲ್ಲಿ ಕೂತು, ವಿಕ್ರಾಂತ ಕರ್ನಾಟಕ ಕಟ್ಟುವ ರವಿ ಕೃಷ್ಣಾ ರೆಡ್ಡಿ ಅವರ ಕನಸು ಅಪೂರ್ಣವಾಯಿತು ಅನ್ನುವಾಗಲೇ, ಮಾಲೀಕತ್ವ ಬದಲಾಗಿದೆ. ಪತ್ರಿಕೆಗೆ ಮತ್ತೆ ನುಣುಪಿನ ಕಾಗದ, ಪುಟಗಳಿಗಳಿಗೆ ಬಣ್ಣ, ಹೊಸ ಉತ್ಸಾಹ ಮರಳಿವೆ. ಕನಸು ನನಸಾಗಲಿ..
***
ಕನ್ನಡ ಪತ್ರಿಕೋದ್ಯಮ ಈಗ ಮೊದಲಿನಂತಿಲ್ಲ. ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಸಿಕ್ಕರೇ, ಬದುಕು ಸಿಕ್ಕಿತು ಎಂಬ ಕಲ್ಪನೆ ಆಗ ಇತ್ತು. ಸಂಯುಕ್ತ ಕರ್ನಾಟಕದಿಂದ ಪ್ರಜಾವಾಣಿಗೆ ಜಂಪ್ ಆದರೆ, ಇದು ನಮ್ಮ ಪೂರ್ವ ಜನ್ಮದ ಸುಕೃತ ಎಂದು ಪತ್ರಕರ್ತರು ಪುಳಕಗೊಳ್ಳುತ್ತಿದ್ದರು.
ಈಗ ಎಲ್ಲವೂ ಅದಲುಬದಲು. ಇರುವ ನಾಲ್ಕೈದು ಕಡೆಗಳಲ್ಲಿಯೇ ಪತ್ರಕರ್ತರು ಸುಳಿದಾಡುವ ಅನಿವಾರ್ಯತೆ ತಪ್ಪುತ್ತಿದೆ. ಹೊಸಹೊಸ ಟೀವಿ ಚಾನೆಲ್ ಗಳು ಕನ್ನಡ ಪತ್ರಕರ್ತರಿಗೆ ಕೆಲಸ ಕೊಡುತ್ತಿವೆ. ವಿಜಯ ಕರ್ನಾಟಕದಂತಹ ಪತ್ರಿಕೆಗಳು 20ರಿಂದ 25ಸಾವಿರ ಸಂಬಳ ನೀಡುವ ಮಟ್ಟಕ್ಕೆ ಬೆಳೆದಿವೆ. ಇದು ಖುಷಿ ವಿಚಾರ. ಹೆಚ್ಚಿನ ಸಂಬಳದಾಸೆಗೆ ಪತ್ರಕರ್ತರ ಜಿಗಿದಾಟ ನಡೆದಿದೆ.