ಹೆಚ್.ಎನ್.ಕಲಾಕ್ಷೇತ್ರ : ಓ ವೀಣಾ ಏಕೆ ಈ ಕಂಪನ?
ಬೆಂಗಳೂರು, ಜುಲೈ 28 : ಖ್ಯಾತ ವೀಣಾ ವಾದಕಿ ವಿದುಷಿ ವೀಣಾ ವಾರುಣಿ, ತಮ್ಮ ತಾಯಿ ಲತಾ ಮೂರ್ತಿ ಅವರ ಜನ್ಮದಿನದ ಅಂಗವಾಗಿ, ಜಯನಗರದ ಎಚ್.ಎನ್, ಕಲಾಕ್ಷೇತ್ರದಲ್ಲಿ ನಾದ ಸ್ಪಂದನ ಎಂಬ ಕಾರ್ಯಕ್ರಮವನ್ನು ಶನಿವಾರ ಸಂಜೆ 6ಗಂಟೆಗೆ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದ ಮುಖಾಂತರ ಮುಂದಿನ ತಿಂಗಳು ಅಮೆರಿಕಕ್ಕೆ ಹೊರಡಲಿರುವ ತಮ್ಮ ತಾಯಿಗೆ ಅವರು, ಮಾತೃವಂದನೆ ಅರ್ಪಿಸುವರು.
ಕಾರ್ಯಕ್ರಮದಲ್ಲಿ ವೀಣಾ ವಾರುಣಿ ಅವರು ಕನ್ನಡ ಹಾಗೂ ಹಿಂದಿಯ ಹಳೆಯ ಚಿತ್ರಗೀತೆಗಳನ್ನು ವೀಣೆಯಲ್ಲಿ ನುಡಿಸಲಿದ್ದಾರೆ. ಇದರ ಜತೆಗೆ ಜುಗಲ್ ಬಂದಿ, ಜಾನಪದ ಹಾಗೂ ಫ್ಯೂಜನ್ ಕಾರ್ಯಕ್ರಮಗಳು ಇರುತ್ತವೆ.
ವಾರುಣಿಯವರ ಸೋದರ ಟಿ .ಕೆ. ಪ್ರಸನ್ನ ಮೂರ್ತಿ ಗಾಯನದ ಸಾಥ್ ನೀಡಿದರೆ , ಸಹೋದರಿ ಜಯಶ್ರೀ ರಾವ್ ಅವರ ಮಗ ಪವನ್ ಕೆ ರಾವ್ ಹಾಗೂ ವಾರುಣಿಯವರ ಮಗ ಯೋಗೇಂದ್ರ ರಕ್ಷಿತ್ ಕೀ ಬೋರ್ಡ್ ನುಡಿಸಲಿದ್ದಾರೆ.
ಹೈ ಟ್ರೆಂಡ್ ಕಾರ್ ಜೋನ್ ರವರ ಪ್ರಾಯೋಜಕತ್ವವಿರುವ ಈ ಸಮಾರಂಭದಲ್ಲಿ, ಡಾ. ವಿಜಯಮ್ಮ ಹಾಗೂ ವಿ. ಮನೋಹರ್ ಭಾಗವಹಿಸಲಿದ್ದಾರೆ. ರವಿ ಬೆಳಗೆರೆ ಸಹ ಆಗಮಿಸುವ ನಿರೀಕ್ಷೆಯಿದೆ.
ವೀಣಾ ವಾರುಣಿಯವರ ಬಗ್ಗೆ :
ಕಳೆದ ಎರಡು ದಶಕಗಳಿಂದ ಶಾಸ್ತ್ರೀಯ ಹಾಗೂ ಚಲನಚಿತ್ರ ಸಂಗೀತವನ್ನು ನುಡಿಸುವ ವೀಣಾ ವಾದಕಿ.ದೇಶ ವಿದೇಶಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ವೀಣಾ ಅವರು ಸುಮಾರು 95 ಕನ್ನಡ ಚಿತ್ರಗಳಿಗೆ ಧ್ವನಿ ಮುದ್ರಣ ಹಾಗೂ ಮರು ಧ್ವನಿ ಮುದ್ರಣಗಳಿಗೆ ವೀಣೆಯನ್ನು ನುಡಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರಾದ ಜಿ.ಕೆ .ವೆಂಕಟೇಶ್, ರಾಜನ್ ನಾಗೇಂದ್ರ, ಎಲ್. ವೈದ್ಯನಾಥನ್, ಮೈಸೂರು ಅನಂತಸ್ವಾಮಿ, ಗುಣಸಿಂಗ್, ಉಪೇಂದ್ರಕುಮಾರ್, ಎಂ. ರಂಗರಾವ್, ಹಂಸಲೇಖ, ವಿ .ಮನೋಹರ್ ಮುಂತಾದವರ ಸಂಗೀತಕ್ಕೆ ವೀಣೆಯನ್ನು ನುಡಿಸಿದ್ದಾರೆ. ಮತ್ತೆ ಹಾಡಿತು ಕೋಗಿಲೆ, ನಾಯಿ ನೆರಳು, ಹಾಲುಂಡ ತವರು, ಮಲಯ ಮಾರುತ, ಗಡಿಬಿಡಿ ಗಂಡ, ಓಂ, ಹೊಸಬಾಳು ಇವರು ಕೆಲಸ ಮಾಡಿರುವ ಕೆಲ ಪ್ರಮುಖ ಚಿತ್ರಗಳು.
ಇದಲ್ಲದೆ ನಾನೇ ವೀಣೆ ನೀನೆ ತಂತಿ, ಬಳ್ಳಿಗೆ ಹೂವು ಚಂದ, ಬಾರು ಕೃಷ್ಣಯ್ಯ, ಶ್ರೀ ಪಾದರಾಜ, ಚುರಾಲಿಯ ಹೈ ತುಮೆ ಮುಂತಾದ ಅಲ್ಬಂ ಗಳಿಗೆ ವೀಣೆ ನುಡಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ವೀಣಾ ವಾರುಣಿ : 99019 02712, 98454 02712
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications